ಸನಾ: ಮಧ್ಯಪ್ರಾಚ್ಯದಲ್ಲಿ ಅರಬ್ ಸಾರ್ವಭೌಮತ್ವದ ಎರಡನೇ ಅತಿದೊಡ್ಡ ರಾಷ್ಟ್ರ ಎನಿಸಿರುವ 'ಯೆಮನ್' ದಕ್ಷಿಣ ಭಾಗದ ಕಡಲಿನಲ್ಲಿ 35 ಮೀನುಗಾರರು ಇರುಳು ಕಳೆದು ಹಗಲಾಗುವ ಹೊತ್ತಿಗೆ ಸಿರಿವಂತರಾಗಿದ್ದಾರೆ. ಅವರಿಗೆ ಅಪರೂಪದ ಕಪ್ಪು ಬಂಗಾರ ಸಿಕ್ಕಿದ್ದು, ಅದರ ಮೌಲ್ಯ ₹10 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ. ಸರೈಹಾ ಕರಾವಳಿಯ ಗಲ್ಫ್ ಆಫ್ ಅಡೆನ್ನಲ್ಲಿ ಹಡಗುಗಳಲ್ಲಿ ಸಾಗುತ್ತಿದ್ದ 35 ಮೀನುಗಾರರಿಗೆ ಏಕಾಏಕಿ ತಿಮಿಂಗಲವೊಂದರ ಮೃತದೇಹ ಎದುರಾಗಿದೆ. ಹತ್ತಿರ ಹೋಗಿ ಗಮನಿಸಿದಾಗ ಅದು ಸ್ಪರ್ಮ್ ವೇಲ್ ವರ್ಗದ ತಿಮಿಂಗಲದ ಮೃತದೇಹ ಎನ್ನುವುದು ತಿಳಿದುಬಂದಿದೆ. ಕುತೂಹಲದಿಂದ ದೇಹವನ್ನು ಸೀಳುತ್ತಾ ಹೋದ ಮೀನುಗಾರರಿಗೆ ತಿಮಿಂಗಲ ಹೊಟ್ಟೆಯಲ್ಲಿ ದೊಡ್ಡ ಉಂಡೆಯೊಂದು ಸಿಕ್ಕಿದೆ. ಅಂಟಂಟಿದ್ದ ಕಪ್ಪು ಬಣ್ಣದ 127 ಕೆ.ಜಿ ಭಾರವಿದ್ದ ಬೃಹತ್ ಉಂಡೆಯು ತಿಮಿಂಗಲದ ವಾಂತಿ ಎಂದು ಬಳಿಕ ಗೊತ್ತಾಗಿದೆ. ಇದನ್ನು ಹೊತ್ತುಕೊಂಡು ಪಟ್ಟಣಕ್ಕೆ ತಂದು ವಿಚಾರಿಸಿದಾಗ ಕಪ್ಪು ಉಂಡೆಯ ಮೌಲ್ಯ 10 ಕೋಟಿ ರೂ.ಗೂ ಅಧಿಕ ಎಂಬುದನ್ನು ತಿಳಿದು ಮೀನುಗಾರರು ಅಚ್ಚರಿಪಟ್ಟಿದ್ದಾರೆ. ಹಲವರು ಅವಿವಾಹಿತರಾಗಿರುವ ಕಾರಣ, ಲಭಿಸುವ ಹಣದಲ್ಲಿಮನೆ ಖರೀದಿ ಮತ್ತು ಮದುವೆಗೂ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಸುಗಂಧ ದ್ರವ್ಯದಲ್ಲಿ ಬಳಕೆ, ಭಾರೀ ಬೇಡಿಕೆ: ಜಗತ್ತಿನ ಪ್ರತಿಷ್ಠಿತ ಕಂಪನಿಗಳು ತಯಾರಿಸುವ ಸುಗಂಧ ದ್ರವ್ಯಗಳಲ್ಲಿ ಈ ತಿಮಿಂಗಲದ ವಾಂತಿ (ಆ್ಯಂಬೆರ್ಗಿಸ್) ಬಳಕೆ ಮಾಡಲಾಗುತ್ತದೆ. ಅತಿಹೆಚ್ಚು ಸಮಯದವರೆಗೆ ಸುಗಂಧವನ್ನು ಕಾಪಾಡಿಕೊಳ್ಳಲು ದ್ರವದೊಂದಿಗೆ ಮಿಶ್ರಣ ಮಾಡಲು ಇದು ಅಗತ್ಯ ಎಂದು ತಯಾರಕರು ಹೇಳುತ್ತಾರೆ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಭಾರಿ ಬೇಡಿಕೆ ಇದೆ.
from India & World News in Kannada | VK Polls https://ift.tt/3z3AqzI