ಬೆಂಗಳೂರು: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಥನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ತಮಿಳುನಾಡು ಚುನಾವಣೆ ಉಸ್ತುವಾರಿಯಾಗಿದ್ದ ಸಿ.ಟಿ.ರವಿ ಅಲ್ಲಿ ಬೆವರು ಹರಿಸಿದ್ದರು. ಬಳಿಕ ಬೆಂಗಳೂರಿಗೆ ಬಂದು ಇಲ್ಲಿನ ತಂಪು ಹವೆಯಲ್ಲಿ ಕುಳಿತು ಮಾತನಾಡಿದ್ದರು. ತಮಿಳುನಾಡಿನಲ್ಲಿ ಕಮಲ ಅರಳುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು. ಜತೆಜತೆಗೇ ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಹಿನ್ನಡೆಯಾದದ್ದರ ಬಗ್ಗೆ ಪರೋಕ್ಷವಾಗಿ ಕುಟುಕಿದ್ದರು. ಅದು ದೊಡ್ಡ ಸುದ್ದಿಯೇನೂ ಆಗಿರಲಿಲ್ಲ. ಇದೀಗ ಸಿ.ಟಿ.ರವಿ, ವಿಜಯನಗರ ಸಾಮ್ರಾಜ್ಯದ ಕೊನೆಯ ರಾಜ ಅಳಿಯ ರಾಮರಾಯನ ವೃತ್ತಾಂತವನ್ನು ಫೇಸ್ಬುಕ್ನಲ್ಲಿ ಬರೆದಿದ್ದಾರೆ. ''ಮರೆಯಲಾಗದ ಮಹಾಸಾಮ್ರಾಜ್ಯ ಎಂಬ ವಿಜಯನಗರದ ಏಳುಬೀಳುಗಳ ಬಗೆಗಿನ ಕಥೆ ಓದುತ್ತಿದ್ದೆ. ಆಗ ಅಳಿಯ ರಾಮರಾಯನ ಕಥೆ ನೆನಪಾಯಿತು,'' ಎಂದು ಬರೆದುಕೊಂಡಿದ್ದಾರೆ. ವಿಜಯನಗರದ ಅಳಿಯ ರಾಮರಾಯ ಸಾಹಸಿಯಾಗಿದ್ದರೂ ಸ್ವಾರ್ಥಿಯಾಗಿದ್ದ. ಜತೆಗೆ ಹೊಗಳುಭಟ್ಟರ ಮಾತಿಗೆ ಮರುಳಾಗುತ್ತಿದ್ದ. ಅನುಮಾನ ಈತನ ಮತ್ತೊಂದು ರೋಗವಾಗಿತ್ತು. ಹಾಗಾಗಿ ಆದಿಲ್ ಶಾಹಿಗಳು ಇವನನ್ನು ಬಗ್ಗು ಬಡಿದು ವಿಜಯನಗರ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆಯುವುದು ಸುಲಭವಾಯಿತು. ಈ ಎಳೆ ಹಿಡಿದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ''ಇಂತಹ ಇತಿಹಾಸದಿಂದ ನಾವೆಷ್ಟು ಪಾಠ ಕಲಿತಿದ್ದೇವೆ?,'' ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ''ಯಾರನ್ನು ಉದ್ದೇಶಿಸಿ ಹೀಗೆ ಹೇಳಿದ್ದೀರಿ? ಪ್ರಸ್ತುತ ಸಂದರ್ಭಕ್ಕೆ ಹೋಲಿಕೆ ಮಾಡಿದ್ದೀರಾ? ನಿಮ್ಮದೇ ಪಕ್ಷದ ಗೊಂದಲವನ್ನು ಪರೋಕ್ಷವಾಗಿ ಬಯಲು ಮಾಡಿದ್ದೀರಾ?,'' ಎಂದು ರವಿ ಅವರತ್ತ ನೆಟ್ಟಿಗರು ಪ್ರಶ್ನೆ ಎಸೆದಿದ್ದಾರೆ. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ''ರವಿಯವರೇ, ರಾಮರಾಯರ ಉದಾಹರಣೆ ಮೂಲಕ ಬಿಎಸ್ವೈ ಆಡಳಿತದ ಬಗ್ಗೆ ಚೆನ್ನಾಗಿ ಹೇಳಿದ್ದೀರಿ. ಈ ಬರಹವು ಬಿಎಸ್ವೈ ಅವರಿಗೆ ದುಷ್ಮನ್ ಎಲ್ಲಿ ಎಂದರೆ ಬಗಲಲ್ಲೇ ಎಂದಂತಾಗಲಿಲ್ಲವೇ?,'' ಎಂದು ವ್ಯಂಗ್ಯವಾಡಿದ್ದಾರೆ. ಕೇಳಲೊಲ್ಲದವರು! ಈ ನಡುವೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ''ಯಾರ ಮಾತನ್ನೂ ಕೇಳಲು ಒಲ್ಲದ ನಾಯಕರು ಅಂತಿಮವಾಗಿ ಹೇಳಲು ಏನೂ ಇಲ್ಲದ ಜನರಿಂದ ಸುತ್ತುವರಿಯುತ್ತಾರೆ,'' ಎಂಬ ಚಿಂತಕ ಆಂಡಿ ಸ್ಟಾನ್ಲಿಅವರ ಸಂದೇಶವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸಮಾಜದ ಎಲ್ಲವರ್ಗದವರಿಗೂ ಇದೊಂದು ಉತ್ತಮ ಸಂದೇಶವಾಗಿದೆ ಎಂದು ಕೂಡ ಉಲ್ಲೇಖ ಮಾಡಿದ್ದಾರೆ. ಇದೂ ಚರ್ಚೆಗೆ ಆಸ್ಪದ ಒದಗಿಸಿದೆ. ಇದು ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಹೇಳಿದ್ದೇ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.
from India & World News in Kannada | VK Polls https://ift.tt/2Rm9URp