ಐತಿಚಂಡ ರಮೇಶ್ ಉತ್ತಪ್ಪ : ನಿತ್ಯ ಕಾಡಂಚಿನ ಗ್ರಾಮಗಳು ಹಾಗೂ ವನ್ಯ ಜೀವಿಗಳ ರಕ್ಷಣೆಗೆ ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ನೌಕರರಿಗೆ ಕೋವಿಡ್ ನೀಡಿದ ವೈದ್ಯಕೀಯ ಸಿಬ್ಬಂದಿಗೆ ಇಲಾಖೆ ನೋಟಿಸ್ ನೀಡಿರುವುದು ಅರಣ್ಯ ರಕ್ಷಣೆಯಲ್ಲಿ ತೊಡಗಿರುವವರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. 'ಅರಣ್ಯದಲ್ಲಿ ಪ್ರಾಣಿಗಳ ರಕ್ಷಣೆಗೆ ಹೋರಾಡುತ್ತಿರುವ ಅರಣ್ಯ ಸಿಬ್ಬಂದಿಗೆ ಕೋವಿಡ್ ಲಸಿಕೆ ಅಗತ್ಯ. ಇದು ಕೇವಲ ಸಿಬ್ಬಂದಿ ಆರೋಗ್ಯದ ಕಾಳಜಿ ಮಾತ್ರವಲ್ಲದೆ ಪ್ರಾಣಿಗಳ ಸುರಕ್ಷತೆಯನ್ನು ಗಮನಿಸಬೇಕಿದೆ. ಕೆಲವು ಮೃಗಾಲಯಗಳಲ್ಲಿ ಹುಲಿ ಹಾಗೂ ಸಿಂಹಕ್ಕೆ ಪಾಲಕರಿಂದಾಗಿ ಕೊರೊನಾ ಸೋಂಕು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇಲಾಖಾ ಸಿಬ್ಬಂದಿ ಸ್ವಾರ್ಥಕ್ಕಾಗಿ ಲಸಿಕೆ ಕೇಳುತ್ತಿದ್ದಾರೆ ಎಂದುಕೊಳ್ಳಬೇಡಿ' ಎಂದು 'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಕೆಲವು ಇಲಾಖಾಧಿಕಾರಿಗಳು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅರಣ್ಯ ಇಲಾಖಾ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆನೆ ದಾಳಿ ಸಂದರ್ಭ, ಗ್ರಾಮಗಳಲ್ಲಿ ಚಿರತೆ, ಹುಲಿಯಿಂದ ತೊಂದರೆಯಾದಾಗ ಹಳ್ಳಿಗಳಿಗೆ ಧಾವಿಸಬೇಕಾಗುತ್ತದೆ. ಆಗ ಜನರ ಸಂಪರ್ಕ ಅನಿವಾರ್ಯ. ಒಂದು ವೇಳೆ ಕೊರೊನಾ ಇದೆ ಎಂದು ಇಲಾಖೆ ಸಿಬ್ಬಂದಿ ವಿಳಂಬ ಮಾಡುವಂತಿಲ್ಲ. ಆದರೆ, ಲಸಿಕೆ ನೀಡುವಾಗ ಮಾತ್ರ ಫ್ರಂಟ್ಲೈನ್ ವಾರಿಯರ್ಸ್ ಎಂದು ಪರಿಗಣಿಸದಿರುವುದು ಹಾಗೂ ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿಗೆ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ರಾಜ್ಯ ಸರಕಾರ ಫ್ರಂಟ್ಲೈನ್ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿದರೂ ಕೇಂದ್ರ ನಿರಾಕರಿಸಿದೆ. ರಾಜ್ಯ ಸರಕಾರ ಈ ಹಿಂದೆ ಕಳುಹಿಸಿದ ಪಟ್ಟಿಯಲ್ಲಿ ಅರಣ್ಯ ಇಲಾಖೆಯನ್ನು ಸೇರಿಸಿತ್ತು. ಆದರೆ, ಕೇಂದ್ರದ ಆರೋಗ್ಯ ಸಚಿವಾಲಯದಿಂದ ಬಂದ ಸುತ್ತೋಲೆ ಪ್ರಕಾರ ರಾಜ್ಯ ಸರಕಾರ ಇಷ್ಟ ಬಂದಂತೆ ಫ್ರಂಟ್ಲೈನ್ ವಾರಿಯರ್ಸ್ ಎಂದು ನಿರ್ಧರಿಸುವಂತಿಲ್ಲ ಎಂದು ಹೇಳಿತ್ತು. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಬಂದ ಆದೇಶದಲ್ಲಿ ಅರಣ್ಯ ಇಲಾಖೆ, ಬ್ಯಾಂಕ್, ರೈಲ್ವೆ ಸಿಬ್ಬಂದಿ ಫ್ರಂಟ್ಲೈನ್ ವಾರಿಯರ್ಸ್ ಅಲ್ಲಎಂದು ತಿಳಿಸಿತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಬ್ಬಂದಿಗೆ ಮೊದಲ ಹಂತದಲ್ಲಿ ಲಸಿಕೆ ನೀಡುವಂತಿಲ್ಲ ಎಂದು ಹೇಳಿದೆ. ಇದನ್ನು ಅರಿಯದೆ ಲಸಿಕೆ ನೀಡಿದ್ದಕ್ಕಾಗಿ ಸಿಬ್ಬಂದಿ ನೋಟಿಸ್ ಪಡೆಯಬೇಕಾಗಿದೆ. ಒಟ್ಟಿನಲ್ಲಿ ಅರಣ್ಯ ಇಲಾಖೆಯ ವಾದವೂ ನ್ಯಾಯ ಸಮ್ಮತವಾಗಿದ್ದರೆ, ಇತ್ತ ಆರೋಗ್ಯ ಇಲಾಖೆ ಕೇಂದ್ರದ ಸೂಚನೆಯನ್ನು ನಿರ್ಲಕ್ಷಿಸಿ ಲಸಿಕೆ ನೀಡಲಾಗದ ಇಕ್ಕಟ್ಟಿನಲ್ಲಿದೆ. 'ಅರಣ್ಯ ಇಲಾಖೆ ಸಿಬ್ಬಂದಿ ತುರ್ತು ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಾರೆ. ಬುಡಕಟ್ಟು ಜನರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಕಾಡುಗಳಲ್ಲಿ ತಿರುಗಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿಗಳ ಸುರಕ್ಷತೆಯೂ ಮುಖ್ಯ. ಈ ಹಿನ್ನೆಲೆಯಲ್ಲಿ ಅವರನ್ನು ಫ್ರಂಟ್ಲೈನ್ ಕೊರೊನಾ ವಾರಿಯರ್ಸ್ ಆಗಿ ಪರಿಗಣಿಸಬೇಕು ಎಂದು ಮನವಿ ಸಲ್ಲಿಸಿದ್ದೇವೆ' ಎಂದು ಡಿಸಿಎಫ್ ಕೆ. ಸಿ. ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
from India & World News in Kannada | VK Polls https://ift.tt/3fLqovL