
ಕಡಬ: ಸರಕಾರಿ ಶಾಲೆಗಳಲ್ಲಿ ತರಗತಿಗಳನ್ನು ಪ್ರಾರಂಭಿಸಿ ಬಡ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಕಲಿಕೆ ದೊರೆಯಬೇಕು ಎನ್ನುವ ದೃಷ್ಠಿಯಿಂದ ರಾಜ್ಯ ಸರಕಾರ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯಲು ಅನುಮತಿ ನೀಡಿದ್ದು, ಇದರಲ್ಲಿ ತಾಲೂಕಿನ ಆಲಂಕಾರು ಹಾಗೂ ಬೊಬ್ಬೆಕೇರಿ ಶಾಲೆಗೂ ಈ ಭಾಗ್ಯ ದೊರೆತಿದೆ. ಸರ್ಕಾರವು 2020-21ನೇ ಸಾಲಿನಲ್ಲಿ ರಾಜ್ಯದ 959 ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಮ ಶಿಕ್ಷಣ ನೀಡಲು ಮುಂದಾಗಿದೆ. ಈ ಯೋಜನೆ ನಿರ್ಧಾರ ಆಗುವ ಮೊದಲೇ ಈ ಎರಡು ಶಾಲೆಗಳಲ್ಲಿ ಪೋಷಕರ, ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ ಎಲ್ಕೆಜಿ, ಯುಕೆಜಿಯಂತಹ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದ್ದು, ಆಲಂಕಾರು ಶಾಲೆಯಲ್ಲಿ ಎಲ್ಕೆಜಿಯಲ್ಲಿ 30 ಮತ್ತು ಯುಕೆಜಿಯಲ್ಲಿ 30 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಗುಬ್ಬಚ್ಚಿ ಸ್ಪೀಕಿಂಗ್ ಆಲಂಕಾರು ಶಾಲೆಯಲ್ಲಿ 1ರಿಂದ 4ನೇ ತರಗತಿಗೆ ಮೀಸಲಾಗಿರುವ ಗುಬ್ಬಚ್ಚಿ ಸ್ಪೀಕಿಂಗ್ ತರಗತಿಯನ್ನು ಈ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದ್ದು ಇದರಲ್ಲಿ ಸ್ಪೋಕನ್ ಇಂಗ್ಲೀಷ್, ಸೆಂಟೆನ್ಸ್ ಪ್ರಾಕ್ಟೀಸ್, ಕಥೆ ನಿರೂಪಣೆ ಇತ್ಯಾದಿ ಇದೆ. ಯುನಿಸೆಫ್ ಪ್ರಾಯೋಜಕತ್ವದಲ್ಲಿ ಚೆನೈ ಮೂಲದ ಕಂಪೆನಿ ಶಾಲೆಯ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಕಾ ತರಗತಿಗಳನ್ನು ನೀಡಲಾಗುತ್ತಿದ್ದು, ಇದಕ್ಕಾಗಿ ಕಂಪೆನಿ 40 ಇಂಚಿನ ಎಲ್ಇಡಿ ಬೃಹತ್ ಟಿವಿಯನ್ನು ಅಳವಡಿಸಿದೆ. ಹಾಗೂ ಸುಮಾರು 70 ಸಾವಿರ ಮೊತ್ತದ ಕಲಿಕಾ ಸಾಮಾಗ್ರಿಗಳನ್ನು ಶಾಲೆಗೆ ನೀಡಿದೆ. ವಿದ್ಯಾರ್ಥಿಗಳ ಸ್ವಾವಲಂಬನೆಗಾಗಿ ಟೈಲರಿಂಗ್, ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಅಸಹಾಯಕ ವಿದ್ಯಾರ್ಥಿಗಳ್ನು ಶೈಕ್ಷಣಿಕ ದತ್ತು ಪಡೆಯಲಾಗುತ್ತಿದೆ. ಶಾಲೆಯಲ್ಲಿ ಮೀನಾ ಕ್ಲಬ್, ಸ್ಕೌಟ್ ಗೈಡ್ಸ್, ಗಣಿತ ಕ್ಲಬ್, ವಿಜ್ಞಾನ ಕ್ಲಬ್, ಸಾಂಸ್ಕೃತಿಕ ಕ್ಲಬ್, ಮಕ್ಕಳ ಹಕ್ಕು ಕ್ಲಬ್ಗಳನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ಶಾಲಾ ವಾಹನದ ವ್ಯವಸ್ಥೆಯೂ ಇದೆ. ಸರಕಾರವೇ ನಮ್ಮಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಅನುಮತಿ ನೀಡಿರುವುದು ಅತೀವ ಸಂತಸ ನೀಡಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ನಿಂಗರಾಜು ಕೆ.ಪಿ. ತಿಳಿಸಿದ್ದಾರೆ. ಪುತ್ತೂರು ತಾಲೂಕಿನ ಇರ್ದೆ, ಬಜತ್ತೂರು, ಕಡಬ ತಾಲೂಕಿನ ಆಲಂಕಾರು, ಬೊಬ್ಬೆಕೇರಿ, ಸುಳ್ಯ ತಾಲೂಕಿನ ಮುರುಳ್ಯ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸರಕಾರ ಅನುಮತಿ ನೀಡಿದೆ. ತರಗತಿಗಳು ಪ್ರಾರಂಭವಾದ ತಕ್ಷಣ ಅನುಮತಿ ದೊರೆತ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ತಕ್ಷಣಕ್ಕೆ ಶಾಲೆಯಲ್ಲಿ ಇರುವ ಶಿಕ್ಷಕರನ್ನೇ ನಿಯೋಜಿಸಲಾಗುವುದು. ಬಳಿಕ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ತಿಳಿಸಿದ್ದಾರೆ.
from India & World News in Kannada | VK Polls https://ift.tt/3vT3Wp7