ಸೂರ್ಯ ಔಟ್‌ ಆದ ಬೆನ್ನಲ್ಲೆ ನಿರಾಶಾದಾಯಕ ಪ್ರತಿಕ್ರಿಯೆ ತೋರಿದ ದ್ರಾವಿಡ್‌! ವಿಡಿಯೋ ವೈರಲ್‌

ಕೊಲಂಬೊ: ಪ್ರವಾಸದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್‌ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಓಡಿಐ ಸರಣಿಯಲ್ಲಿ ಎರಡು ಅತ್ಯುತ್ತಮ ಇನಿಂಗ್ಸ್‌ಗಳನ್ನು ಆಡಿದ್ದ ಯಾದವ್‌, ಭಾನುವಾರ ಮೊದಲನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತ ತಂಡದ 38 ರನ್‌ಗಳ ಗೆಲುವಿಗೆ ನೆರವಾಗಿದ್ದರು. ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಪರ ಅದ್ಭುತ ಬ್ಯಾಟ್‌ ಪ್ರದರ್ಶನ ತೋರಿದ್ದರು. ಅವರು ಆಡಿದ್ದ ಕೇವಲ 34 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಇವರ ಇನಿಂಗ್ಸ್‌ನಲ್ಲಿ ಐದು ಬೌಂಡರಿಗಳು ಹಾಗೂ ಎರಡು ಸಿಕ್ಸರ್‌ಗಳು ಒಳಗೊಂಡಿವೆ. 7ನೇ ಓವರ್‌ನಲ್ಲಿ 51 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡ ಸಂದರ್ಭದಲ್ಲಿ ಕ್ರೀಸ್‌ಗೆ ಬಂದಿದ್ದ ಸೂರ್ಯಕುಮಾರ್‌ ಯಾದವ್, ನಾಯಕ ಶಿಖರ್‌ ಧವನ್‌ ಅವರ ಜೊತೆಗೂಡಿ ಮೂರನೇ ವಿಕೆಟ್‌ಗೆ 62 ರನ್‌ ಜತೆಯಾಟವಾಡಿದ್ದರು. ಆ ಮೂಲಕ ಭಾರತದ ಮೊತ್ತವನ್ನು ಮೂರಂಕಿ ಗಡಿ ದಾಟಿಸಲು ನೆರವಾಗಿದ್ದರು. ಅರ್ಧಶತಕದಂಚಿನಲ್ಲಿ ಧವನ್, ಚಮಿಕಾ ಕರುಣರತ್ನಗೆ ವಿಕೆಟ್‌ ಒಪ್ಪಿಸಿದ ಬಳಿಕ ಈ ಜೋಡಿಯ ಜತೆಯಾಟ ಮುರಿಯಿತು. ಅದ್ಭುತ ಶೈಲಿಯಲ್ಲಿ ಬ್ಯಾಟ್‌ ಮಾಡುತ್ತಿದ್ದ ಸೂರ್ಯಕುಮಾರ್‌ ಯಾದವ್‌ ಅವರು, ವನಿಂದು ಹಸರಂಗ ಎಸೆತದಲ್ಲಿ ಟಿ20 ಕ್ರಿಕೆಟ್‌ ವೃತ್ತಿ ಜೀವನದ ಎರಡನೇ ಅರ್ಧಶತಕ ಪೂರೈಸಿದರು. ನಂತರ ಹಸರಂಗ ಎಸೆದ ಫ್ಲೈಟ್‌ ಎಸೆತದಲ್ಲಿ ಬಲವಾದ ಹೊಡೆತಕ್ಕೆ ಪ್ರಯತ್ನಿಸಿ ವಿಫಲರಾದ ಮುಂಬೈ ಮೂಲದ ಬ್ಯಾಟ್ಸ್‌ಮನ್‌ ಲಾಂಗ್ ಆಫ್‌ನಲ್ಲಿ ರಮೇಶ್‌ ಮೆಂಡಿಸ್‌ಗೆ ಕ್ಯಾಚ್‌ ಕೊಟ್ಟು ನಿರಾಸೆಯಿಂದ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಭರ್ಜರಿ ಬ್ಯಾಟ್‌ ಮಾಡುತ್ತಿದ್ದ ಸೂರ್ಯಕುಮಾರ್‌ ಯಾದವ್‌ ವಿಕೆಟ್‌ ಒಪ್ಪಿಸಿದ ವೇಳೆ ಹೆಡ್‌ ಕೋಚ್‌ ನಿರಾಶಾದಾಯಕ ಪ್ರತಿಕ್ರಿಯೆ ತೋರಿದ್ದರು. ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಅಲ್ಲದೆ, ತಪ್ಪು ಹೊಡೆತಕ್ಕೆ ಕೈ ಹಾಕಿದ ಸೂರ್ಯಕುಮಾರ್‌ ಯಾದವ್‌ ಕೂಡ ಕೆಲ ಸೆಕೆಂಡ್‌ಗಳ ಕಾಲ ಕ್ರೀಸ್‌ ಬಳಿಯೇ ನಿಂತು ಪರಿತಪಿಸಿದರು. ನಂತರ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತ ಇಶಾನ್‌ ಕಿಶನ್‌ 14 ಎಸೆತಗಳಲ್ಲಿ 20 ಗಳಿಸಿದರು. ಆದರೆ, ಹಾರ್ಡ್ ಹಿಟ್ಟರ್‌ ಹಾರ್ದಿಕ್‌ ಪಾಂಡ್ಯ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಇದರ ಹೊರತಾಗಿಯೂ ಭಾರತ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 164 ರನ್‌ ಕಲೆ ಹಾಕಿತು. ಗುರಿ ಹಿಂಬಾಲಿಸಿದ ಶ್ರೀಲಂಕಾ ತಂಡ, ಭುವನೇಶ್ವರ್‌ ಕುಮಾರ್ ಮಾರಕ ದಾಳಿಗೆ ನಲುಗಿ 126 ರನ್‌ಗಳಿಗೆ ಆಲೌಟ್‌ ಆಯಿತು. ಮೊದಲ ಪಂದ್ಯದ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಉಭಯ ತಂಡಗಳು ಮಂಗಳವಾರ ಇದೇ ಕ್ರೀಡಾಂಗಣದಲ್ಲಿ ಎರಡನೇ ಹಣಾಹಣಿಯಲ್ಲಿ ಕಾದಾಟ ನಡೆಸಲಿವೆ. ಟಿ20 ಸರಣಿ ಮುಗಿದ ಬಳಿಕ ಸೂರ್ಯಕುಮಾರ್‌ ಯಾದವ್ ಅವರು ಸಹ ಆಟಗಾರ ಪೃಥ್ವಿ ಶಾ ಹಾಗೂ ಆಫ್‌ ಸ್ಪಿನ್ನರ್‌ ಜಯಂತ್‌ ಯಾದವ್‌ ಅವರೊಂದಿಗೆ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಟೀಮ್‌ ಇಂಡಿಯಾಗೆ ಸೇರ್ಪಡೆಯಾಗಲಿದ್ದಾರೆ. ಸಂಕ್ಷಿಪ್ತ ಸ್ಕೋರ್‌ ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 164 ರನ್ (ಶಿಖರ್‌ ಧವನ್ 46, ಸಂಜು ಸ್ಯಾಮ್ಸನ್ 27, ಹಾರ್ದಿಕ್ ಪಾಂಡ್ಯ 50, ಇಶಾನ್‌ ಕಿಶನ್ 20*; ದುಶ್ಮಾಂತ ಚಾಮೀರ 24ಕ್ಕೆ 2, ವಾನಿಂದು ಹಸರಂಗ 28ಕ್ಕೆ 2). ಶ್ರೀಲಂಕಾ: 18.3 ಓವರ್‌ಗಳಲ್ಲಿ 126ಕ್ಕೆ ಆಲ್‌ಔಟ್‌ (ಅವಿಷ್ಕ ಫರ್ನಾಂಡೊ 26, ಚರಿತ್ ಅಸಲಂಕ 44; ಭುವನೇಶ್ವರ್ ಕುಮಾರ್‌ 22ಕ್ಕೆ 4, ದೀಪಕ್ ಚಹರ್ 24ಕ್ಕೆ 2).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2V9lWyX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...