ರಾಹುಲ್-ಮಯಾಂಕ್ ಇರುವಾಗ ಮತ್ತೊಬ್ಬ ಓಪನರ್‌ ಬೇಕೆ? ಸೆಲೆಕ್ಟರ್ಸ್‌ಗೆ ಕಪಿಲ್ ಬೌನ್ಸರ್‌!

ಹೊಸದಿಲ್ಲಿ: ಶುಭಮನ್‌ ಗಿಲ್‌ ಗಾಯಗೊಂಡಿದ್ದು ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ಅಲಭ್ಯರಾಗಿದ್ದಾರೆ. ಈ ಸಂದರ್ಭದಲ್ಲಿ ಬದಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಈ ಕುರಿತಾಗಿ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌, ತಂಡದಲ್ಲಿ ಈಗಾಗಗಲೇ ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮಯಾಂಕ್ ಅಗರ್ವಾಲ್‌ ಮತ್ತು ಕೆಎಲ್‌ ರಾಹುಲ್‌ ಇರುವ ಸಂದರ್ಭದಲ್ಲಿ ಪೃಥ್ವಿ ಶಾ ಅವರನ್ನು ಕರೆಸಿಕೊಳ್ಳುವ ಮೂರ್ಖತನವನ್ನು ಸೆಲೆಕ್ಟರ್ಸ್‌ ಮಾಡಲಾರರು ಎಂದಿದ್ದಾರೆ. ವರದಿಗಳ ಪ್ರಕಾರ ಈಗಾಗಲೇ ಶ್ರೀಲಂಕಾ ಪ್ರವಾಸದಲ್ಲಿ ಇರುವ ಫೃಥ್ವಿ ಶಾ ಅವರನ್ನು ಶುಭಮನ್‌ ಗಿಲ್‌ಗೆ ಬದಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಇಂಗ್ಲೆಂಡ್‌ಗೆ ಕಳುಹಿಸಿಕೊಡಲಾಗುತ್ತದೆ ಎನ್ನಲಾಗಿದೆ. ಗಿಲ್‌ ಮುಂಗಾಲಿನ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕನಿಷ್ಠ 2 ತಿಂಗಳ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. "ಟೀಮ್ ಇಂಡಿಯಾಗೆ ಓಪನರ್‌ ಸಲುವಾಗಿ ಮೂರನೇ ಆಯ್ಕೆಯ ಅಗತ್ಯ ಖಂಡಿತಾ ಇಲ್ಲ. ಸೆಲೆಕ್ಟರ್ಸ್‌ಗೆ ಇಲ್ಲಿ ಸ್ವಲ್ಪವಾದರೂ ಗೌರವ ಇರಬೇಕು. ಏಕೆಂದರೆ ಈಗಾಗಲೇ ದೊಡ್ಡ ತಂಡವನ್ನು ಆಯ್ಕೆ ಮಾಡಲಾಗಿದೆ. ಕೊಹ್ಲಿ ಮತ್ತು ಶಾಸ್ತ್ರಿ ಜೊತೆಗೆ ಚರ್ಚಿಸಿಯೇ ಈ ತಂಡ ಪ್ರಕಟ ಮಾಡಲಾಗಿದೆ. ಇನ್ನು ತಂಡದಲ್ಲಿ ಮತ್ತು ಅವರಂತಹ ದೈತ್ಯ ಓಪನರ್‌ಗಳಿದ್ದಾರೆ. ಹೀಗಿರುವಾಗ ಮೂರನೇ ಓಪನರ್‌ ಆಯ್ಕೆಯ ಅವಶಕ್ಯತೆ ಇದೆಯೇ? ಆಯ್ಕೆ ಮಾಡಿದ್ದೇ ಆದರೆ ಖಂಡಿತಾ ಅದು ಸರಿಯಾದ ನಿರ್ಧಾರವಲ್ಲ," ಎಂದು ಸುದ್ದಿ ವಾಹಿನಿಯೊಂದಕ್ಕೆ ಕಪಿಲ್ ತಿಳಿಸಿದ್ದಾರೆ. "ಪೃಥ್ವಿ ಶಾ ಅವರನ್ನು ಇಂಗ್ಲೆಂಡ್‌ಗೆ ಕಳುಹಿಸಿಕೊಡುವ ಆಲೋಚನೆಯನ್ನು ನಾನು ವಿರೋಧಿಸುತ್ತೇನೆ. ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ಈಗಾಗಲೇ ಆರಂಭಿಕರು ಇದ್ದಾರೆ. ಅವರನ್ನೇ ಆಡುವ ಹನ್ನೊಂದರ ಬಳಗದಲ್ಲಿ ಆಡಿಸಬೇಕು. ಇಲ್ಲವಾದರೆ ತಂಡಕ್ಕೆ ಆಯ್ಕೆ ಮಾಡಲಾಗಿರುವ ಆಟಗಾರರಿಗೆ ಮಾಡಿದ ಬಹುದೊಡ್ಡ ಅಪಮಾನ ಇದಾಗಲಿದೆ," ಎಂದು ಕಪಿಲ್ ಅಭಿಪ್ರಾಯ ಪಟ್ಟಿದ್ದಾರೆ. ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್‌ ರಾಹುಲ್ ಹೊರತಾಗಿ ಹೆಚ್ಚುವರಿ ಆರಂಭಿಕನಾಗಿ ಪಶ್ಚಿಮ ಬಂಗಾಳದ ಆಟಗಾರ ಅಭಿಮನ್ಯ ಈಶ್ವರನ್ ಕೂಡ ಇದ್ದಾರೆ. ಹೀಗಾಗಿ ಪೃಥ್ವಿ ಶಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದು ಬಹುತೇಕ ಅನುಮಾನವಾಗಿದೆ. ಐದು ಟೆಸ್ಟ್‌ಗಳ ಸರಣಿ ಆಗಸ್ಟ್‌ 4ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿದೆ. ಭಾರತ ತಂಡ ಸದ್ಯ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಸೋಲಿನ ನಂತರ 20 ದಿನಗಳ ರಜೆಯಲ್ಲಿದ್ದು, ಜುಲೈ 15ರಂದು ಅಭ್ಯಾಸ ಆರಂಭಿಸಲಿದೆ. ಈ ಸಂದರ್ಭದಲ್ಲಿ 2 ಪ್ರಥಮದರ್ಜೆ ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಇಲ್ಲಿ ರೋಹಿತ್‌ಗೆ ಉತ್ತಮ ಜೊತೆಗಾರನ ಆಯ್ಕೆ ಆಗಲಿದೆ. ಮಯಾಂಕ್ ಅಗರ್ವಾಲ್ ಮೊದಲ ಆಯ್ಕೆಯ ಓಪನರ್‌ ಎನ್ನಲಾಗುತ್ತಿದೆ. ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಭಾರತ ತಂಡ ಹೀಗಿದೆವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್ (ಗಾಯಗೊಂಡು ಸರಣಿಗೆ ಅಲಭ್ಯ), ಮಾಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್‌), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಕೆಎಲ್‌ ರಾಹುಲ್ ಮತ್ತು ವೃದ್ಧಿಮಾನ್ ಸಹಾ ಕಾಯ್ದಿರಿಸಿದ ಆಟಗಾರರು: ಪ್ರಸಿಧ್ ಕೃಷ್ಣ, ಅಭಿಮನ್ಯು ಈಶ್ವರನ್, ಅರ್ಝಾನ್ ನಾಗವಾಸವಾಲ, ಅವೇಶ್ ಖಾನ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3xhEhbt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...