ವಿಜಯಪುರ: ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಜಿಲ್ಲೆಯ ಇಂಡಿ ಡಿಪೋ ಬಸ್ಸಿನಲ್ಲಿದ್ದ 19 ಜನರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ. ಮಹಾರಾಷ್ಟ್ರದ ಕೊಲ್ಹಾಪುರದ ಬಳಿ ಕರ್ನಾಟಕಕ್ಕೆ ಸೇರಿದ ಬಸ್ಸಿನಲ್ಲಿ ನೀರು ನುಗ್ಗಿತ್ತು. ಇದರಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದರು. ಇಂಡಿ-ರತ್ನಗಿರಿ ಬಸ್ ಶುಕ್ರವಾರ ರತ್ನಗಿರಿಗೆ ಹೊರಟಿತ್ತು. ಆದರೆ, ಕೊಲ್ಹಾಪುರದಿಂದ ರತ್ನಗಿರಿಗೆ ತೆರಳುವ ಮಾರ್ಗದಲ್ಲಿ ಕೃಷ್ಣಾ ನದಿಯ ಪ್ರವಾಹ ಏಕಾಏಕಿ ಏರಿಕೆಯಾಗಿದ್ದರಿಂದ ಅರ್ಧ ಬಸ್ ನೀರಿನಲ್ಲಿ ಮುಳುಗಿ ಹೋಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಎನ್ಡಿಆರ್ಎಫ್ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ, ಬಸ್ಸಿನಲ್ಲಿದ್ದ 19 ಪ್ರಯಾಣಿಕರನ್ನು ಡೋಣಿಯ ಮೂಲಕ ಸುರಕ್ಷಿತ ಸ್ಥಳ ತಲುಪಿಸಿದರು. ಬಳಿಕ ವಿಷಯ ತಿಳಿದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ನೆರವಾಗಿದ್ದಾರೆ.
from India & World News in Kannada | VK Polls https://ift.tt/3iyY6ES