ಬೆಂಗಳೂರು: ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಆರೋಪ ಕೇಳಿ ಬಂದ ಬೆನ್ನಲ್ಲೇ, ಸಿ.ವಿ.ರಾಮನ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ರಘು ಅವರ ವಿರುದ್ಧವೂ ಲಸಿಕೆ ದುರ್ಬಳಕೆ ಆರೋಪ ಮಾಡಲಾಗಿದೆ. ಭುವನೇಶ್ವರಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀಡಬೇಕಿದ್ದ ಲಸಿಕಾ ಕಾರ್ಯಕ್ರಮವನ್ನು ರದ್ದುಗೊಳಿಸಿ, ಸಮೀಪದ ಕಲ್ಯಾಣ ಮಂಟಪವೊಂದರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅವರ ಸಂಬಂಧಿಕರಿಗೆ ಲಸಿಕೆ ಹಾಕಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಸಂಬಂಧ ಲಸಿಕಾ ಕೇಂದ್ರದ ಮುಂದೆ ಮಂಗಳವಾರ ಪ್ರತಿಭಟನೆಯೂ ನಡೆದಿದೆ. ಏನಿದು ಘಟನೆ? ಭುವನೇಶ್ವರಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಮೇ 31ರಂದು ಸಾರ್ವಜನಿಕರಿಗೆ ಉಚಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ 300 ಟೋಕನ್ಗಳನ್ನು ವಿತರಣೆ ಮಾಡಿ, ಸ್ಥಳದಲ್ಲೇ ನೋಂದಣಿಗೆ ತಿಳಿಸಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಮಂದಿ ಕೇಂದ್ರಕ್ಕೆ ಆಗಮಿಸಿದ್ದರು. ಸುಮಾರು 10.30 ಗಂಟೆಯಾದರೂ ಲಸಿಕೆ ನೀಡಲು ಅಧಿಕಾರಿಗಳು ಮುಂದಾಗಲಿಲ್ಲ. ಕಾದು ಕಾದು ಸುಸ್ತಾದ ಜನರು, ಸಮೀಪದ ಓಂ ಶಕ್ತಿ ಕಲ್ಯಾಣ ಮಂಟಪದ ಕಡೆ ತೆರಳಲು ಮುಂದಾದರು. ಸ್ಥಳೀಯ ಶಾಸಕರ ಆದೇಶದ ಮೇರೆಗೆ ಆರೋಗ್ಯ ಕೇಂದ್ರದಲ್ಲಿ ಉಚಿತ ಲಸಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಲ್ಯಾಣ ಮಂಟಪದಲ್ಲಿ ಎಸ್.ರಘು ಅವರ ಭಾವಚಿತ್ರವುಳ್ಳ ಹಾಗೂ 'ಶಾಸಕರಿಂದ ಉಚಿತ ಲಸಿಕಾ ಕಾರ್ಯಕ್ರಮ' ಎಂಬ ಬ್ಯಾನರ್ ಹಾಕಿ, ಕೇವಲ ಬಿಜೆಪಿ ಕಾರ್ಯಕರ್ತರು, ಅವರ ಕುಟುಂಬದವರು ಮತ್ತು ಸಂಬಂಧಿಕರಿಗೆ ಲಸಿಕೆ ಹಾಕಲಾಗಿದೆ ಎಂದು ದೂರಿದ್ದಾರೆ. ''ಲಸಿಕೆ ಹಾಕಿಸಲು ಟೋಕನ್ ಪಡೆದಿದ್ದೆ. ಬೆಳಗ್ಗೆ 8 ಗಂಟೆಗೆ ತಿಂಡಿ ಸಮೇತ ತಂದೆ ಮತ್ತು ತಾಯಿಯನ್ನು ಪಿಎಚ್ಸಿಗೆ ಕರೆತಂದಿದ್ದೆ. ಲಸಿಕೆಗೆ 9.25ರ ಒಳಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಸಮಯ 10.25 ಆದರೂ, ಲಸಿಕೆ ನೀಡಲಿಲ್ಲ. ಬೇಸತ್ತ ಜನರು, ಸಮೀಪದ ಕಲ್ಯಾಣ ಮಂಟಪದ ಕಡೆ ತೆರಳುತ್ತಿದ್ದರು. ಈ ವೇಳೆ ನನ್ನ ಪೋಷಕರು ಸಹ ಅಲ್ಲಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ಶಾಸಕರ ಸೂಚನೆ ಮೇರೆಗೆ ಪಿಎಚ್ಸಿಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು. ಕಲ್ಯಾಣ ಮಂಟಪದ ಬಳಿ ಶಾಸಕ ರಘು ಅವರಿಂದ ಉಚಿತ ಲಸಿಕಾ ಕಾರ್ಯಕ್ರಮ ಎಂದು ಬ್ಯಾನರ್ ಹಾಕಲಾಗಿತ್ತು. ಸುಮಾರು 45 ನಿಮಿಷ ಕಾದರೂ ಲಸಿಕೆ ಹಾಕಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಶಾಸಕರು ಬಂದ ನಂತರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಟೋಕನ್ ನೀಡಿರುವವರನ್ನು ಬಿಟ್ಟು, ಬಿಜೆಪಿ ಕಾರ್ಯಕರ್ತರು, ಅವರ ಸಂಬಂಧಿಕರಿಗೆ ಲಸಿಕೆ ನೀಡಲಾಗುತ್ತಿತ್ತು. ಇದು ಸರಕಾರದ ಉಚಿತ ಲಸಿಕಾ ಕಾರ್ಯಕ್ರಮ. ಆದರೆ, ಶಾಸಕರು ಉಚಿತವಾಗಿ ನೀಡಲು ಹೇಗೆ ಸಾಧ್ಯ? ತಮ್ಮ ಪಕ್ಷದ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ಅಕ್ರಮ ಎಸಗಲಾಗುತ್ತಿದೆ,'' ಎಂದು ಸಾರ್ವಜನಿಕರೊಬ್ಬರು ಆಪಾದಿಸಿದರು. ಶಾಸಕ ರಘು ಅವರ ಈ ಕಾರ್ಯದ ಬಗ್ಗೆ ಆಪ್ ಆಕ್ರೋಶ ವ್ಯಕ್ತಪಡಿಸಿದೆ. 'ಶಾಸಕ ರವಿ ಸುಬ್ರಹ್ಮಣ್ಯ ಅವರ ನಂತರ ಶಾಸಕ ಎಸ್.ರಘು ಅವರು ಲಸಿಕೆ ಅಕ್ರಮಕ್ಕೆ ಕೈ ಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಲಸಿಕೆ ಅಕ್ರಮ ನಡೆಸುತ್ತಿದೆ. ಬಿಜೆಪಿಯವರು ಅಭಿಯಾನವನ್ನು ಕಮಿಷನ್ ದಂಧೆಯಾಗಿ ಮಾಡಿಕೊಂಡಿದ್ದಾರೆ. ಆ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ,' ಎಂದು ಆಪ್ ಅಧ್ಯಕ್ಷ ಮೋಹನ್ ದಾಸರಿ ದೂರಿದ್ದಾರೆ.
from India & World News in Kannada | VK Polls https://ift.tt/3ihKWgO