ಬೆಂಗಳೂರು: ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ್ದ ಗೂಗಲ್ ಸಂಸ್ಥೆ ಈ ವಿಚಾರವಾಗಿ ಕ್ಷಮೆಯಾಚನೆ ಮಾಡಿದ್ದರಿಂದ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಮತ್ತು ಸಂಸ್ಕೃತಿ ಸಚಿವ ಶ್ರೀ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಗೂಗಲ್ ನವರು ಎಚ್ಚೆತ್ತುಕೊಂಡು ಕ್ಷಮೆ ಕೇಳಿದ್ದಾರೆ. ಕನ್ನಡಕ್ಕೆ ಅವಮಾನ ಮಾಡಿದ ಕಾರಣಕ್ಕಾಗಿ ಕಾನೂನು ಕ್ರಮಕ್ಕೆ ನಾವು ಮುಂದಾಗಿದ್ದೆವು. ಇಂತಹ ಪ್ರಕರಣ ಮತ್ತೆ ಆಗಬಾರದು. ಅದಕ್ಕೆ ಪ್ರಕರಣವನ್ನು ಕೈಬಿಟ್ಟಿದ್ದೇವೆ ಎಂದು ತಿಳಿಸಿದರು. ಭಾರತದ ಕೆಟ್ಟ ಭಾಷೆ ಯಾವುದು ಎಂದು ನೆಟ್ಟಿಗರು ಗೂಗಲ್ ನಲ್ಲಿ ಪ್ರಶ್ನೆ ಮಾಡಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಈ ವಿಚಾರ ಕನ್ನಡಿಗರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.ಇದಕ್ಕೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಅರವಿಂದ ಲಿಂಬಾವಳಿ, ಇದು ಅತ್ಯಂತ ಖಂಡನೀಯ ಸಂಗತಿ. ಗೂಗಲ್ ಆಗಲಿ ,ಬೇರೆ ಯಾರೇ ಆಗಲಿ ಕನ್ನಡ ಭಾಷೆ ಬಗ್ಗೆ ಗೌರವವಿಲ್ಲದೆ ವರ್ತಿಸಿದರೆ ಅಥವಾ ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದರು. ಕನ್ನಡ ಭಾಷೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ ಭಾರತದ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಪಡೆದಿರುವ ಭಾಷೆಯ ಬಗ್ಗೆ ಕೀಳಾಗಿ ಮಾತಾಡಿದರೂ ಅದನ್ನು ಸಹಿಸಲಾಗುವುದಿಲ್ಲ, ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅವರಿಗೆ ಈ ಸಂಬಂಧ ಕಾನೂನು ಇಲಾಖೆಯ ಜೊತೆಗೂಡಿ ಚರ್ಚಿಸಿ ಕೂಡಲೇ ಗೂಗಲ್ ಗೆ ನೋಟಿಸ್ ನೀಡಲು ಸೂಚಿಸಿದ್ದೇನೆ ಎಂದು ಅವರು ತಿಳಿಸಿದ್ದರು. ಆದರೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗೂಗಲ್ ಇದಕ್ಕಾಗಿ ಕ್ಷಮೆಯಾಚನೆಯನ್ನು ಮಾಡಿದೆ.
from India & World News in Kannada | VK Polls https://ift.tt/3prjKxR