ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಲಸಿಕೆ ವಿತರಣೆ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಸಾವಿನ ಪ್ರಮಾಣ ಇಳಿಮುಖವಾಗುತ್ತಿಲ್ಲ. ನಿನ್ನೆ ಕೋವಿಡ್ಗೆ 514 ಜನರನ್ನು ಕಳೆದುಕೊಂಡಿರುವುದು ನೋವನ್ನುಂಟುಮಾಡಿದೆ ಎಂದಿದ್ದಾರೆ. ಸದ್ಯ ಶೇ.12ಕ್ಕೂ ಹೆಚ್ಚು ಪಾಸಿಟಿವಿಟಿ ರೇಟ್ ಇದೆ. ಸಾವಿನ ಪ್ರಮಾಣ ತಗ್ಗಿಸಲು ಸರಿಯಾದ ರೀತಿಯಲ್ಲಿ ಲಸಿಕೆ ವಿತರಣೆ ಪ್ರಕ್ರಿಯೆ ನಡೆಸುವಂತೆ ಈ ಮೂಲಕ ಆಗ್ರಹಿಸುತ್ತೇವೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಗುರುವಾರ 18324 ಪ್ರಕರಣಗಳು ವರದಿಯಾಗಿವೆ.ಸದ್ಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 286798 ರಷ್ಟಿದೆ. ಗುರುವಾರ ಒಂದೇ ದಿನ ಕೊವಿಡ್ನಿಂದ 514 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 30531 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಸಾವಿನ ಪ್ರಮಾಣ 2.80 ರಷ್ಟಿದ್ದರೆ ಸೋಂಕಿನ ಶೇಕಡಾವಾರು ಪ್ರಮಾಣ 12.20 ರಷ್ಟಿದೆ. ಇನ್ನು ಕೋವಿಡ್ ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಪೂರೈಕೆಯಾಗಲಿರುವ 45 ಲಕ್ಷ ಡೋಸ್ ಲಸಿಕೆ ಮತ್ತು ರಾಜ್ಯ ಸರ್ಕಾರ ಖರೀದಿಸುತ್ತಿರುವ ಲಸಿಕೆ ಪೈಕಿ 13.7 ಲಕ್ಷ ಡೋಸ್ ಸೇರಿದಂತೆ ಒಟ್ಟು 58.71 ಲಕ್ಷ ಡೋಸ್ ಕೊರೊನಾ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
from India & World News in Kannada | VK Polls https://ift.tt/3igNbB6