ಬೆಂಗಳೂರು: ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡದಂತೆ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸೂಚಿಸುವುದರೊಂದಿಗೆ ಈ ವಿಚಾರದಲ್ಲಿ ತಲೆದೋರಿದ್ದ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಆದರೆ, ಕಾಂಗ್ರೆಸ್ನ ಬಣ ರಾಜಕೀಯದ ಇತಿಹಾಸ ನೋಡಿದರೆ ಕುರ್ಚಿ ಸಂಘರ್ಷಕ್ಕೆ ಫುಲ್ಸ್ಟಾಪ್ ಬಿದ್ದಿದೆ ಎನ್ನಲಾಗದು! ಸಿದ್ದರಾಮಯ್ಯ ಆಪ್ತ ವಲಯದ ಶಾಸಕ ಜಮೀರ್ ಅಹ್ಮದ್ ಇನ್ನಿತರರ ಹೇಳಿಕೆಯಿಂದ ಕಾಂಗ್ರೆಸ್ನಲ್ಲಿ ಮುಂದಿನ ಬಗ್ಗೆ ಚರ್ಚೆ ಶುರುವಾಯಿತು. ಇದಕ್ಕೆ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರು ತಿರುಗೇಟು ನೀಡಿದರು. ನಾಯಕತ್ವದ ಚರ್ಚೆ ಮಾಡಬಾರದೆಂದು ಹೈಕಮಾಂಡ್ ಕಡೆಯಿಂದ ತಾಕೀತು ಮಾಡಿಸುವುದರಲ್ಲೂ ಡಿಕೆಶಿ ಯಶಸ್ವಿಯಾಗಿದ್ದರು. ಆದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿಯ ಸೂಚನೆ ಬಳಿಕವೂ ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಾಯಕನ ಪರ ಬ್ಯಾಟ್ ಬೀಸುವುದು ಮುಂದುವರಿದಿತ್ತು. ಸಿದ್ದರಾಮಯ್ಯ ಬೆಂಬಲಿಗರಿಗೆ ಹೈಕಮಾಂಡ್ಗಿಂತಲೂ ತಮ್ಮ ನಾಯಕನೇ ಮುಖ್ಯ ಎಂಬಂತಿದೆ ಈ ಬೆಳವಣಿಗೆ. ಅಂತಿಮವಾಗಿ ಸಿದ್ದರಾಮಯ್ಯ ಅವರೇ ಮನವಿ ಮಾಡಿಕೊಂಡಿದ್ದರಿಂದ ಶಾಸಕರ ಬಾಯಿಗೆ ಬೀಗ ಬೀಳುವ ನಿರೀಕ್ಷೆ ಇರಿಸಿಕೊಳ್ಳಬಹುದು. ಆದರೆ, ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಾಯಕನ ಸಮರ್ಥನೆಗೆ ಯಾವಾಗ ಬೇಕಾದರೂ ಅಖಾಡಕ್ಕೆ ಇಳಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ವಿಧಾನಸಭೆ ಚುನಾವಣೆಗೆ ಎರಡು ವರ್ಷ ಬಾಕಿಯಿರುವುದೇನೋ ಸರಿ. ಇದರ ಮಧ್ಯೆ ಬಹು ನಿರೀಕ್ಷಿತ ಕೆಪಿಸಿಸಿ ಪದಾಧಿಕಾರಿಗಳ ನೇಮಕದ ವೇಳೆ ಸಿದ್ದರಾಮಯ್ಯ ಪಟ್ಟು ಹಾಕುವ ಎಲ್ಲ ಸಾಧ್ಯತೆಯೂ ಇದೆ. ಇದನ್ನು ನೋಡಿಕೊಂಡು ಡಿಕೆಶಿ ಬೆಂಬಲಿಗರೂ ಸುಮ್ಮನೆ ಕುಳಿತುಕೊಳ್ಳಲಾರರು. ಹಾಗಾಗಿ ಸಿಎಂ ಅಭ್ಯರ್ಥಿ ಬಗ್ಗೆ ನೇರವಾಗಿ ಪ್ರಸ್ತಾಪವಾಗದಿದ್ದರೂ ಮುಸುಕಿನ ಗುದ್ದಾಟ ಮುಂದುವರಿಯುವ ಲಕ್ಷಣ ಕಾಣಿಸಿದೆ. ಟ್ರೆಂಡ್ ಸೆಟ್ ಮಾಡುವ ಯತ್ನ ಹಾಲಿ ವಿಧಾನಸಭೆ ಅವಧಿ 2023ರ ಮೇ ಮಧ್ಯ ಭಾಗದಲ್ಲಿಅಂತ್ಯಗೊಳ್ಳುತ್ತದೆ. ಹಾಗಾಗಿ ಚುನಾವಣೆಗೆ ಸಜ್ಜಾಗಲು ತಾಲೀಮು ಮಾಡಲು ಇದು ಸಕಾಲ. ಈ ಹಂತದಲ್ಲೆ ನಾಯಕತ್ವದ ಬಗ್ಗೆ ಟ್ರೆಂಡ್ ಸೆಟ್ ಮಾಡಬೇಕು ಎನ್ನುವುದು ಉಭಯ ಬಣಗಳ ಲೆಕ್ಕಾಚಾರ. ಭರ್ತಿ 5 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸ್ವತಃ ಕುಶಲ ತಂತ್ರಗಾರರು. ಈ ಸಂಬಂಧದಲ್ಲಿ ಅವರ ತಂಡವೂ ಅಷ್ಟೇ ಆಕ್ರಮಣಶೀಲ ಸ್ವಭಾವ ಹೊಂದಿದೆ. ಹಾಗಾಗಿ ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಾಯಕನ ಪರ ಮುಖ್ಯವಾಹಿನಿಯಲ್ಲಿ ಅಭಿಪ್ರಾಯ ಮೂಡಿಸುವ ಕಸರತ್ತನ್ನು ಈಗಾಗಲೇ ಆರಂಭಿಸಿದ್ದಾರೆ. ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ನಲ್ಲಿ ಮಹತ್ವದ ಭೂಮಿಕೆ ನಿಭಾಯಿಸುತ್ತ ಬಂದವರು. ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಸಿಎಂ ಅಭ್ಯರ್ಥಿಯಾಗಲು ಅವರು ಅರ್ಹತೆ ಪಡೆದುಕೊಂಡಂತಾಗಿದೆ. ಈ ಅವಕಾಶ ಕಳೆದುಕೊಳ್ಳಬಾರದು ಎನ್ನುವುದು ಡಿಕೆಶಿ ಪಾಳಯದ ಮುಂದಾಲೋಚನೆ. ಅದಕ್ಕಾಗಿ ಸಿದ್ದರಾಮಯ್ಯ ಬಣ ಸೊಲ್ಲೆತ್ತಿದರೆ ಅದನ್ನು ಅಡಗಿಸಲು ಬೇಕಾದ ಬಂದೋಬಸ್ತ್ ಮಾಡಿಸಲು ಡಿಕೆಶಿ ಕ್ಯಾಂಪ್ ಫೀಲ್ಡಿಗಿಳಿಯುತ್ತದೆ. ಹಾಗಾಗಿ ಮುಂದಿನ ಸಿಎಂ ಅಭ್ಯರ್ಥಿಯ ವಿಷಯ ಮುನ್ನೆಲೆಗೆ ಬಂದಾಗ ಜಂಗೀ ಕುಸ್ತಿಯ ವಾತಾವರಣ ನಿರ್ಮಾಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಹೈಕಮಾಂಡ್ ನೀಡುವ ಸಂದೇಶ ಮೊದಲ ಡೋಸ್ನಂತೆ ಕೆಲಸ ಮಾಡುತ್ತಿದೆ. ಅದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಅದಕ್ಕೆ ಬೇಕಾದ 'ಬೂಸ್ಟರ್ ಡೋಸ್' ಅನ್ನು ಸ್ಥಳೀಯ ನಾಯಕರೇ ನೀಡಬೇಕಾಗುತ್ತದೆ. ಅದರಿಂದಾಗಿ ಕದನಕ್ಕೆ ಸಂಪೂರ್ಣ ವಿರಾಮ ಬೀಳದಿದ್ದರೂ ಗಡಿ ರೇಖೆ ಉಲ್ಲಂಘಿಸಿದವರು ಹೆಜ್ಜೆ ಹಿಂದೆ ಸರಿಸುತ್ತಾರೆ. ಸಿದ್ದರಾಮಯ್ಯ ನಿರ್ದೇಶನದ ಬಳಿಕ ಬೆಂಬಲಿಗ ಶಾಸಕರು ಸದ್ಯಕ್ಕೆ ಮೌನ ತಾಳಿದ್ದಾರೆ. ಡಿಕೆಶಿಯವರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎನ್ನುವಂತೆ ಮಾತನಾಡಿದ್ದಾರೆ. ಇದು ಕಾಂಗ್ರೆಸ್ನೊಳಗಿನ ರಾಜಕಾರಣದ ಮಜಕೂರಿ. ಮುಗುಮ್ಮಾಗಿರುವ ತಟಸ್ಥ ಬಣ ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೊರತಾದ ಮತ್ತೊಂದು ಬಣವಿದೆ. ಇದು ತಟಸ್ಥರ ಕೂಟ. ಇಲ್ಲಿಯೂ ಹಲವು ನಾಯಕರಿದ್ದಾರೆ. ಈ ಮುಖಂಡರು ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳಿಂದ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದಾರೆ. ಈ ತಟಸ್ಥರ ಪಾಳಯದಲ್ಲಿ ಹೈಕಮಾಂಡ್ಗೆ ಹತ್ತಿರವಾಗಿರುವ ಪ್ರಭಾವಿಗಳೂ ಇದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನಡುವೆ ತಾಕಲಾಟ ಉಂಟಾದಾಗ 'ಥರ್ಡ್ ಅಂಪೈರ್' ರೀತಿ ಈ ಬಣದವರು ಹೈಕಮಾಂಡ್ಗೆ ಅಭಿಪ್ರಾಯ ನೀಡಬಲ್ಲವರಾಗಿದ್ದಾರೆ. ಸಿಎಂ ಅಭ್ಯರ್ಥಿ ವಿಚಾರ ಹಾಗೂ ಪದಾಧಿಕಾರಿ ನೇಮಕ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಣದ ನಡುವೆ ಪ್ರತಿಷ್ಠೆಯ ಮೇಲಾಟವಾದರೆ ಈ ಮೂರನೇ ಬಣದವರು ನಿರ್ಣಾಯಕ ಪಾತ್ರ ವಹಿಸಿಯಾರು ಎಂಬ ಮಾತುಗಳೂ ಕೇಳಿ ಬರುತ್ತಿವೆ.
from India & World News in Kannada | VK Polls https://ift.tt/3dc9F2Y