ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಜಾರಿಯಲ್ಲಿರುವ ಕೆಲವು ಕ್ಷೇತ್ರಗಳಿಗೆ ಸಡಿಲಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಲಾಕ್ಡೌನ್ ಜಾರಿಯಲ್ಲಿದ್ದರೂ ಈಗಾಗಲೇ ರಫ್ತು ಆಧಾರಿತ ಕೈಗಾರಿಕೆಗಳಿಗೆ ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗಿದೆ. ಉಳಿದಂತೆ ಜೂನ್ 7 ರವರೆಗೆ ಯಾವುದೇ ಬದಲಾವಣೆಗಳು ಇಲ್ಲ. ಆದರೆ ಜೂನ್ ಏಳರ ಬಳಿಕ ಲಾಕ್ಡೌನ್ ನಿರ್ಬಂಧಗಳು ಒಂದು ವಾರಗಳ ಕಾಲ ಜಾರಿಯಲ್ಲಿದ್ದರೂ ಕೆಲವು ಕ್ಷೇತ್ರಗಳಿಗೆ ಸಡಿಲಿಕೆ ಮಾಡುವ ಸಾಧ್ಯತೆ ಇದೆ. ಜವಳಿ ಕ್ಷೇತ್ರ ಲಾಕ್ಡೌನ್ನಿಂದಾಗಿ ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಮದುವೆ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರೂ ಜವಳಿ ಅಂಗಡಿ ಬಂದ್ ಮಾಡಲಾಗಿದೆ. ಇದರಿಂದ ಉದ್ಯಮಕ್ಕೂ ಹಾಗೂ ಜನರಿಗೂ ತೊಂದರೆ ಉಂಟಾಗಿದೆ. ಈ ನಿಟ್ಟಿನಲ್ಲಿ ಜವಳಿ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿ ಕೊಡುವ ಸಾಧ್ಯತೆ ಇದೆ. ಅದರಂತೆ ಚಿನ್ನದ ಒಡವೆಗಳ ಮಾರಾಟ ಅಂಗಡಿಗಳಿಗೂ ತೆರೆಯಲು ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಲಾಕ್ಡೌನ್ನಿಂದ ಸಡಿಲಿಕೆ ನೀಡಿದರೂ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ. ಜ್ಯುವೆಲ್ಲರಿ ಶಾಪ್ಗಳ ಮಾಲೀಕರು ಈ ಬಗ್ಗೆ ಬೇಡಿಕೆಯನ್ನು ಇಟ್ಟಿದ್ದರು. ಲಾಕ್ಡೌನ್ನಿಂದ ಭಾರೀ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಅವಕಾಶ ನೀಡಬೇಕು ಎಂದಿದ್ದರು. ಅದರ ಜೊತೆಗೆ ಕೃಷಿ ಆಧಾರಿತ ಮಾರಾಟ ಅಂಗಡಿಗಳು, ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿರುವ ಸಾಮಗ್ರಿಗಳ ಮಾರಾಟ ಅಂಗಡಿಗಳಿಗೆ ತೆರಯಲು ಅವಕಾಶ ನೀಡಬಹುದು. ಆರಂಭಿಕ ಹಂತದಲ್ಲಿ ಕೆಲವರಿಗೆ ಮಾತ್ರ ಇಂತಹ ಅವಕಾಶ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ತಜ್ಞರು ಹಾಗೂ ಸಚಿವರ ಜೊತೆಗೆ ಸಿಎಂ ಬಿಎಸ್ ಯಡಿಯೂರಪ್ಪ ಪ್ರತ್ಯೇಕ ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಚರ್ಚೆಗಳನ್ನು ಆಧಾರವಾಗಿ ಇಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೂನ್ 5 ಅಥವಾ ಆರರಂದು ಈ ಕುರಿತಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅಂತಿಮ ಘೋಷಣೆ ಮಾಡಲಿದ್ದಾರೆ. ಕೋವಿಡ್ ನಿಯಂತ್ರಣದ ಜತೆಗೆ ಆರ್ಥಿಕ ಸಂಕಷ್ಟದಿಂದ ಪಾರಾಗುವುದು ಕೂಡಾ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಏನು ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/3vOdD9l