
ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರ ಹೆಸರಿನಲ್ಲಿ ಸೃಷ್ಟಿಸಿದ್ದ ವಂಚಕರು, ತಮ್ಮ ಮೂತ್ರಪಿಂಡ ಮಾರಾಟ ಮಾಡಲು ಬಯಸುವವರಿಗೆ 5 ಕೋಟಿ ರೂ ನೀಡುವ ಆಹ್ವಾನ ನೀಡಿದ್ದು ಬೆಳಕಿಗೆ ಬಂದಿದೆ. ಈ ವಂಚನೆಯ ಕುರಿತಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ವೈದ್ಯ ಡಾ. ನಿರಂಜನ್ ಪೈ ಅವರು ಸೈಬರ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೆಬ್ಸೈಟ್ ತೆರೆದಿದ್ದ ಡಾ. ಥಾಮಸ್ ಜೋಸೆಫ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಣಿಪಾಲ್ ಆಸ್ಪತ್ರೆಯ ಮೂಲ ವೆಬ್ಸೈಟ್ ಅನ್ನು ಅಕ್ಷರಶಃ ಹೋಲುವಂತೆಯೇ ನಕಲಿ ವೆಬ್ಸೈಟ್ ಅನ್ನು ವಂಚಕರು ಸೃಷ್ಟಿಸಿದ್ದರು. 'ನಿಮ್ಮ ಕಿಡ್ನಿಯನ್ನು 5 ಕೋಟಿ ರೂಪಾಯಿಗೆ ಮಾರಾಟ ಮಾಡಿ. ಇಂದೇ ನಮ್ಮನ್ನು ಸಂಪರ್ಕಿಸಿ ಮತ್ತು ಅದೇ ದಿನ ಹಣ ಪಡೆದುಕೊಳ್ಳಿ; ನಿಮ್ಮ ಒಂದು ಕಿಡ್ನಿಯನ್ನು ಮಾರಾಟ ಮಾಡಿ ಸಹಜ ಜೀವ ನಡೆಸಬಹುದು' ಎಂದು ನಕಲಿ ವೆಬ್ಸೈಟ್ನಲ್ಲಿ ಡಾ. ಥಾಮಸ್ ಜೋಸೆಫ್ ಸಂದೇಶ ನೀಡಿದ್ದ. ವೆಬ್ಸೈಟ್ಗೆ ಲಾಗಿನ್ ಆದವರಿಗೆ ವಿಭಿನ್ನ ಕೊಂಡಿಗಳ ಸಂಪರ್ಕ ತೆರೆದುಕೊಳ್ಳುತ್ತಿತ್ತು. ನೋಂದಣಿ ಶುಲ್ಕ ಪಾವತಿಸುವ ಹಂತದಿಂದಲೇ ವಂಚನೆಗಳು ನಡೆದಿರುವಂತೆ ಕಾಣಿಸುತ್ತದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದುಷ್ಕರ್ಮಿಗಳು ಬೇರೆ ರಾಜ್ಯದಿಂದ ಚಟುವಟಿಕೆ ನಡೆಸುತ್ತಿರುವಂತಿದೆ. ನಾವು ಅವರ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ನಾವು ತನಿಖೆಯ ಆರಂಭಿಕ ಹಂತದಲ್ಲಿದ್ದೇವೆ. ಈ ವಂಚಕರ ಜಾಲದೊಳಗೆ ಬೀಳದಂತೆ ಜನರನ್ನು ಎಚ್ಚರಿಸುವ ಅಗತ್ಯವಿದೆ. ಅವರಿಂದ ಯಾರಾದರೂ ಹಣ ಕಳೆದುಕೊಂಡಿದ್ದರೆ ಅವರು ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಬಾಗಲೂರು ಪೊಲೀಸರು, ಕಿಡ್ನಿಗಳನ್ನು ಖರೀದಿ ಹಾಗೂ ಮಾರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣಗಳ ಸಂದೇಶ ಹಾಗೂ ಇಮೇಲ್ಗಳನ್ನು ಕಳುಹಿಸುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಬಂಧಿಸಿದ್ದರು. ಈ ಎರಡೂ ಪ್ರಕರಣಗಳಿಗೂ ಸಂಬಂಧವಿದೆಯೇ ಎನ್ನುವುದು ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
from India & World News in Kannada | VK Polls https://ift.tt/3gWUZH4