ಸಂವಿಧಾನ ರಚಿಸಿದ್ದು ಅಂಬೇಡ್ಕರ್‌ ಹೌದಾ, ಅಲ್ವಾ ? ಸದನದಲ್ಲಿ ಬಿಸಿ ಬಿಸಿ ಚರ್ಚೆ

ಬೆಂಗಳೂರು: ಭಾರತದ ಸಂವಿಧಾನವನ್ನು ಬರೆದಿದ್ದು ಬಿ.ಆರ್‌ ಅಂಬೇಡ್ಕರ್ ಹೌದಾ ಅಥವಾ ಅಲ್ವಾ ಎಂಬ ವಿಚಾರ ಸದನದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಚರ್ಚೆಗೆ ಗ್ರಾಸವಾಯಿತು. ಮಂಗಳವಾರ ಸದನದಲ್ಲಿ ಸಂವಿಧಾನದ ಕುರಿತಾದ ಚರ್ಚೆಯ ಪ್ರಾಸ್ತಾವಿಕ ಭಾಷಣವನ್ನು ಮಾಡಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಚನಾ ಸಭೆಗೆ ಆಯ್ಕೆಯಾಗಿದ್ದ ಮಂಗಳೂರು ಮೂಲಕ ಬಿ.ಎನ್‌ ರಾವ್‌ ಅವರ ಕೊಡುಗೆ ಅಪಾರವಾದುದು ಎಂದಿದ್ದರು. ಬಿ.ಎನ್‌ ರಾವ್ ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಡಾ. ಬಿಆರ್‌ ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು. ಇದನ್ನು ರಚನಾ ಸಮಿತಿಯಲ್ಲಿ ಚರ್ಚಿಸಿ ಅಂಬೇಡ್ಕರ್ ನೇತೃತ್ವದಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಲಾಯಿತು ಎಂದು ಉಲ್ಲೇಖಿಸಿದ್ದರು. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಎಚ್‌.ಕೆ ಪಾಟೀಲ್, ಬಿ.ಎನ್ ರಾವ್ ಸಂವಿಧಾನದ ಕರಡನ್ನು ರಚನೆ ಮಾಡಿದ್ದಾರೆ ಎಂಬವುದು ತಪ್ಪು ಮಾಹಿತಿ, ಇತಿಹಾಸವನ್ನು ತಿರುಚುವ ಕೆಲಸ ಮಾಡಬಾರದು ಎಂದರು. ಒಂದು ವೇಳೆ ಆಕಸ್ಮಿಕವಾಗಿ ತಪ್ಪಾದಲ್ಲಿ ಅದನ್ನು ತಿದ್ದುಪಡಿ ಮಾಡಬೇಕು ಎಂದು ಸ್ಪೀಕರ್‌ಗೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಾಸ್ತಾವಿಕ ಭಾಷಣದಲ್ಲಿ ತಪ್ಪಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ತಯಾರಿದ್ದೇನೆ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಂವಿಧಾನದ ರಚನೆಯ ಸಂದರ್ಭದ ಮಾಹಿತಿಯನ್ನು ನೀಡುತ್ತಾ, ಕರಡು ಸಮಿತಿಯಲ್ಲಿ ಏಳು ಜನ ಸದಸ್ಯರಿದ್ದರು. ಆದರೆ ಈ ಪೈಕಿ ಒಬ್ಬರು ನಿಧನರಾಗಿದ್ದು ಉಳಿದವರು ಬೇರೆ ಬೇರೆ ಕಾರಣಗಳಿಂದಾಗಿ ಸಕ್ರಿಯವಾಗಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.ಈ ಹಿನ್ನೆಲೆಯಲ್ಲಿ ಸಂವಿಧಾನದವನ್ನು ಸಂಪೂರ್ಣವಾಗಿ ರಚನೆ ಮಾಡುವಲ್ಲಿ ಡಾ. ಪಾತ್ರ ಬಹುಮುಖ್ಯವಾದುದು ಎಂದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಿಎಸ್‌ವೈ, ಸಂವಿಧಾನದ ರಚನೆ ಹಿಂದೆ ಅಂಬೇಡ್ಕರ್‌ ಅವರ ಶ್ರಮ ಅಪಾರವಾದುದು, ಸಮಿತಿಯ ಏಳು ಜನರಲ್ಲಿ ಎಲ್ಲರೂ ಗೈರಾದ ಸಂದರ್ಭದಲ್ಲಿ ಸಂವಿಧಾನವನ್ನು ರಚನೆ ಮಾಡಿದವರು ಅವರು. ಈ ನಿಟ್ಟಿನಲ್ಲಿ ಎಲ್ಲಾ ಗೌರವವೂ ಅಂಬೇಡ್ಕರ್ ಅವರಿಗೆ ಸಲ್ಲಬೇಕು ಎಂದರು. ಇನ್ನು ಪ್ರಿಯಾಂಕ್ ಖರ್ಗೆ ಮಾತನಾಡಿ, ಸಂವಿಧಾನ ರಚನೆ ಮಾಡಿದ್ದು ಯಾರು ಎಂಬ ಗೊಂದಲ ಸೃಷ್ಟಿಗೆ ಕಾರಣವನ್ನು ನೀಡುತ್ತಾ, 2011 ರಲ್ಲಿ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಆಫ್ ಆರ್ಟ್‌ ಮುಖ್ಯಸ್ಥ ರಾಮ್ ಬಹುದೂರ್ ರಾಯ್ ಎಂಬುವವರು ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ ಎಂಬುವುದು ತಪ್ಪು ಕಲ್ಪನೆಯಾಗಿದೆ ಎಂದು ಹೇಳಿದ್ದಾರೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ಸಂವಿಧಾನದ ಕರಡನ್ನು ಬಿ.ಎನ್ ರಾವ್ ರಚಿಸಿದರು, ಅಂಬೇಡ್ಕರ್‌ ಅದನ್ನು ತಿದ್ದುಪಡಿ ಮಾಡಿದರು, ಈ ನಿಟ್ಟಿನಲ್ಲಿ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ಸೀಮಿತ ಎಂದಿದ್ದರು. ಅಲ್ಲದೆ ಅಂಬೇಡ್ಕರ್‌ ಸಂವಿಧಾನವನ್ನು ಬರೆದಿಲ್ಲ ಎಂದು ಹೇಳಿದ್ದರು. ಈ ಮೂಲಕ ಇತಿಹಾಸವನ್ನು ತಿರುಚುವ ಸಂಗತಿ ನಡೆಯುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಹರ್ಷದ್, ಗುಜರಾತ್ ವಿಧಾನಸಭೆ ಸ್ಪೀಕರ್ ತ್ರಿವೇದಿಯವರು ಕೂಡಾ ಅಂಬೇಡ್ಕರ್‌ ಸಂವಿಧಾನ ರಚನೆ ಮಾಡಿಲ್ಲ ಎಂದು ಹೇಳಿದ್ದರು ಎಂಬ ವಿಚಾರವನ್ನು ಸದನದ ಗಮನಕ್ಕೆ ತಂದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಪೀಕರ್‌ ಈ ವಿಚಾರವನ್ನು ಮುಂದುವರಿಸುವುದು ಬೇಡ ಎಂದು ಚರ್ಚೆಗೆ ತೆರೆ ಎಳೆದರು.


from India & World News in Kannada | VK Polls https://ift.tt/39oeq5v

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...