ಬೆಂಗಳೂರು: ಸಿಎಂ ಪುತ್ರ ಬಿ.ವೈ ವಿಜಯೇಂದ್ರ ದೂರಿನ ಅನ್ವಯ ಸಚಿವ ಆಪ್ತ ಸಹಾಯಕ ರಾಜಣ್ಣ ಎಂಬಾತನನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ವಿಜಯೇಂದ್ರ ಹಾಗೂ ಹಲವು ಸಚಿವರ ಹೆಸರು ಬಳಸಿಕೊಂಡು ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ಆರೋಪ ಈ ವ್ಯಕ್ತಿಯ ಮೇಲಿದೆ. ರಾಜಣ್ಣ ಬಂಧನ ಸಚಿವ ಶ್ರೀರಾಮುಲುಗೆ ಮುಜುಗರ ತಂದೊಡ್ಡಿದೆ. ಅಲ್ಲದೆ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ. ದೂರಿನ ಅನ್ವಯ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣನನ್ನು 7 ಮಿನಿಸ್ಟರ್ಸ್ ಕಾಟ್ರಸ್ ಸಮೀಪದಲ್ಲೇ ಬಂಧಿಸಲಾಗಿದೆ. ಆದರೆ ಈ ವಿಚಾರವನ್ನು ನನ್ನ ಗಮನಕ್ಕೆ ತರಬಹುದಿತ್ತು ಎಂಬ ಅಸಮಾಧಾನವನ್ನು ಸಚಿವ ಶ್ರೀರಾಮುಲು ತಮ್ಮ ಆಪ್ತರ ಹತ್ತಿರ ಹೇಳಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ರಾಜಣ್ಣ ಶ್ರೀರಾಮುಲು ಅವರ ಆಪ್ತ ಸಹಾಕಯರಾಗಿ ಕೆಲಸ ಮಾಡುತ್ತಿದ್ದ. ಇದೀಗ ವಸೂಲಿ ಪ್ರಕರಣದಲ್ಲಿ ರಾಜಣ್ಣ ಬಂಧನ ಆಗಿದೆ. ಸಹಜವಾಗಿ ಇದು ಸಚಿವ ಶ್ರೀರಾಮುಲುಗೆ ಮುಜುಗರವನ್ನು ತಂದೊಡ್ಡಿದೆ. ಈ ನಿಟ್ಟಿನಲ್ಲಿ ಬಂಧನಕ್ಕೂ ಮೊದಲೇ ನನ್ನ ಗಮನಕ್ಕೆ ತಂದಿದ್ದರೆ ಅಂಥವರನ್ನು ಕೆಲಸದಿಂದಲೇ ವಜಾ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅದರ ಬದಲಾಗಿ ಏಕಾ ಏಕಿ ಸಿಸಿಬಿ ಪೊಲೀಸರು ಸಚಿವರ ಸರ್ಕಾರಿ ಬಂಗಲೆಯಿಂದಲೇ ರಾಜಣ್ಣ ಅವರನ್ನು ಬಂಧಿಸಿದ್ದು ಶ್ರೀರಾಮುಲು ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ರಾಜಣ್ಣ ವಿಜಯೇಂದ್ರ ಹೆಸರನ್ನು ಬಳಸಿಕೊಂಡು ವರ್ಗಾವಣೆ ಹಾಗೂ ಇನ್ನಿತರ ಕೆಲಸ ಮಾಡಿಸಿಕೊಟ್ಟು ಕೋಟ್ಯಂತರ ಹಣ ವಸೂಲಿ ಮಾಡುತ್ತಿದ್ದ. ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಸಿಸಿಬಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಬಂಧನ ನಡೆದಿದೆ.
from India & World News in Kannada | VK Polls https://ift.tt/3hrRZl9