ಮಕ್ಕಳ ಮೊಟ್ಟೆಯಲ್ಲೂ ಹಣ ಮಾಡಿ ಬದುಕುವ ಪರಿಸ್ಥಿತಿ ಸಚಿವೆಗೆ ಬರಬಾರ್ದಿತ್ತು; ಮಹಿಳಾ ಕಾಂಗ್ರೆಸ್‌

ಬೆಂಗಳೂರು: ರಾಜ್ಯದಲ್ಲಿಅಪೌಷ್ಟಿಕತೆ ನಿವಾರಣೆಗಾಗಿ ಗರ್ಭಿಣಿಯರು, ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲೂ ಸಚಿವೆ ಅವರು ಹಣ ಮಾಡುವ ಅಮಾನವೀಯ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಮಹಿಳಾ ಕಾಂಗ್ರೆಸ್‌, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ‘ಗರ್ಭಿಣಿಯರು, ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಣ ಮಾಡಿ ಬದುಕುವ ದುಸ್ಥಿತಿ ಸಚಿವರಿಗೆ ಬಂದಿದೆಯೇ? ಹಿಂದೆ ಕಾಂಗ್ರೆಸ್‌ ಸರಕಾರ ಅಪೌಷ್ಟಿಕತೆ ನಿವಾರಣೆಗಾಗಿ ಮೊಟ್ಟೆ ವಿತರಿಸುವ ಯೋಜನೆ ಜಾರಿಗೊಳಿಸಿತ್ತು. ಇದರಲ್ಲೂ ಕೋಟ್ಯಂತರ ರೂ. ಕಮಿಷನ್‌ ಪಡೆಯುವ ಹುನ್ನಾರ ನಡೆಯುತ್ತಿರುವುದು ದುರಾದೃಷ್ಟಕರ. ಇದು ಮಹಿಳೆಯರು ಮತ್ತು ಮಕ್ಕಳಿಗೆ ಮಾಡಿದ ದೊಡ್ಡ ದ್ರೋಹ’ ಎಂದು ಕಿಡಿ ಕಾರಿದರು. ಟೆಂಡರ್‌ ಕರೆಯುವ ಮುನ್ನವೇ ಗುತ್ತಿಗೆದಾರರ ಬಳಿ ಕಮಿಷನ್‌ ಪಡೆಯಲು ಸಚಿವರು ಮುಂದಾಗಿರುವುದು ಖಂಡನೀಯ. ಸಚಿವರು ಸಮರ್ಥನೆ ನೀಡುವುದನ್ನು ಬಿಟ್ಟು ಕೂಡಲೇ ಮೊಟ್ಟೆ ಖರೀದಿ ಟೆಂಡರ್‌ ಪ್ರಕ್ರಿಯೆ ಕೈಬಿಡಬೇಕು. ಈಗಾಗಲೇ ಟೆಂಡರ್‌ ಆಹ್ವಾನಿಸಿದ್ದರೆ ರದ್ದುಪಡಿಸಿ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ‘ಕೂಡಲೇ ಶಶಿಕಲಾ ಜೊಲ್ಲೆಅವರು ಸಚಿವ ಸ್ಥಾನಕ್ಕೆ ಹಾಗೂ ಪರಣ್ಣ ಮುನವಳ್ಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು. ಕಾಂಗ್ರೆಸ್‌ನ ಕುಸುಮಾ ಹನುಮಂತರಾಯಪ್ಪ, ಸಚಿವೆ ಶಶಿಕಲಾ ಜೊಲ್ಲೆ ಅವರು ರಾಜೀನಾಮೆ ನೀಡುವವರೆಗೂ ಸಚಿವರ ಮನೆಗೆ ನಿತ್ಯ ಮೊಟ್ಟೆ ನೀಡುವ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


from India & World News in Kannada | VK Polls https://ift.tt/3eSTokt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...