ಬೆಂಗಳೂರು: ಅನಾರೋಗ್ಯ ಪೀಡಿತ ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ಸಹೋದರರು ವೃದ್ಧೆಯೊಬ್ಬರ ಸರ ಕದ್ದು ಸಿಕ್ಕಿಬಿದ್ದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಕಾಮಾಕ್ಷಿಪಾಳ್ಯದ ಸುದೀಪ್ ಹಾಗೂ ರಜತ್ ಎಂಬ ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಸಹೋದರರು ಬಿಎಸ್ಸಿ ಹಾಗೂ ಬಿಕಾಂ ಓದಿದ್ದಾರೆ. ಕಾಮಾಕ್ಷಿಪಾಳ್ಯ ನಿವಾಸಿಗಳಾಗಿದ್ದ ಆರೋಪಿಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ನಿಂದ ಇಬ್ಬರು ಕೆಲಸ ಕಳೆದುಕೊಂಡಿದ್ದರು. ಸಾಲ ಬಾಧೆಯೂ ಹೆಚ್ಚಾಗಿತ್ತು. ಇದರ ನಡುವೆ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹಣ ಹೊಂದಿಸಲು ಪರಿದಾಡಿದ ಸೋದರರು, ನಂತರ ಕಳ್ಳತನದ ಮಾರ್ಗ ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದರು. ಜು.6ರಂದು ಬೆಳಗ್ಗೆ ವಿದ್ಯಾರಣ್ಯಪುರ ಠಾಣೆಯ ಎಂಪಿಎ ಲೇಔಟ್ನಲ್ಲಿ ಪಾರ್ಕ್ ಬಳಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಈ ಇಬ್ಬರು ಆರೋಪಿಗಳು ಹಿಂಬಾಲಿಸಿ ಸರ ಕಸಿದಿದ್ದಾರೆ. ಆರೋಪಿಗಳು ಸರ ಎಳೆದ ರಭಸಕ್ಕೆ ವೃದ್ಧೆಯು ನೆಲಕ್ಕೆ ಬಿದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
from India & World News in Kannada | VK Polls https://ift.tt/2UMfpKC