ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯ ಬೆನ್ನಲ್ಲೇ ಇದೀಗ ಚರ್ಚೆ ಶುರುವಾಗಿದೆ. ಬಿಎಸ್ವೈ ನಾಯಕತ್ವದ ಪರ ಹಾಗೂ ವಿರೋಧಿಗಳ ದೆಹಲಿ ಭೇಟಿ ಬೆನ್ನಲ್ಲೇ ರಾಜಕೀಯ ಬೆಳವಣಿಗಳ ಸ್ವರೂಪ ಹಾಗೂ ದಿಕ್ಕುಗಳು ಬದಲಾಗುತ್ತಿವೆ. ಸದ್ಯ ನಾಯಕತ್ವ ಬದಲಾವಣೆ ಚರ್ಚೆ ತಿರುವು ಪಡೆದುಕೊಂಡಿದ್ದು ಹೈಕಮಾಂಡ್ ಸಂಪುಟಕ್ಕೆ ಸರ್ಜರಿ ಮಾಡಲು ಒಲವು ವ್ಯಕ್ತಪಡಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ದೂರು ನೀಡಲು ಸಚಿವ ಸಿ.ಪಿ ಯೋಗೀಶ್ವರ್ ದೆಹಲಿಗೆ ತೆರಳಿದ್ದರು. ಇದವರಿಗೆ ಅರವಿಂದ್ ಬೆಲ್ಲದ ಕೂಡಾ ಸಾಥ್ ನೀಡಿದ್ದರು. ದೆಹಲಿಯಿಂದ ಬಂದ ಸಿಪಿವೈ ಬಿ.ವೈ ವಿಜಯೇಂದ್ರ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಅಲ್ಲದೆ ರಾಜ್ಯದಲ್ಲಿ ಮೂರು ಪಕ್ಷಗಳ ಸರ್ಕಾರ ನಡೆಯುತ್ತಿದೆ ಎಂದು ಆರೋಪ ಮಾಡಿದ್ದರು. ಆದರೆ ಈ ಆರೋಪ ಹಾಗೂ ನಾಯಕತ್ವ ಬದಲಾವಣೆಯ ಚರ್ಚೆಯ ಬೆನ್ನಲ್ಲೇ ಸಿಎಂ ಪುತ್ರ ವಿಜಯೇಂದ್ರ ದೆಹಲಿಗೆ ತೆರಳಿದ್ದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಇತರ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಬೆನ್ನಲ್ಲೇ ನಾಯಕತ್ವ ಬದಲಾವಣೆ ವಿಚಾರ ಮರೆಯಾಗಿದ್ದು ಸಂಪುಟ ಪುನಾರಚನೆ ವಿಚಾರ ಮುನ್ನಲೆಗೆ ಬಂದಿದೆ. ಕೋವಿಡ್ ಸಂದರ್ಭದಲ್ಲಿ ನಿಷ್ಕ್ರಿಯವಾಗಿರುವ ಸಚಿವರನ್ನು ಕೈಬಿಟ್ಟು ಯುವಕರಿಗೆ ಆದ್ಯತೆ ನೀಡಲಾಗುತ್ತದೆ. ಈ ಕುರಿತಾಗಿ ಹೈಕಮಾಂಡ್ ಕೂಡಾ ಒಲವು ವ್ಯಕ್ತಪಡಿಸಿದೆ ಎಂಬ ಮಾಹಿತಿ ಇದೆ. ಆದರೆ ಇದು ಇನ್ನೂ ಅಧಿಕೃತಗೊಂಡಿಲ್ಲ. ಆದರೆ ಯಾರನ್ನೆಲ್ಲಾ ಕೈಬಿಡುತ್ತಾರೆ ಎಂಬ ವಿಚಾರವೂ ಕುತೂಹಲ ಕೆರಳಿಸಿದೆ. ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದ ಸಿಪಿ ಯೋಗೀಶ್ವರ್ ಅವರ ತಲೆದಂಡ ಆಗುತ್ತಾ ಎಂಬ ವಿಚಾರವೂ ಅಷ್ಟೇ ಕುತೂಹಲಕ್ಕೆ ಕಾರಣವಾಗಿದೆ. ಸಂಪುಟ ಪುನಾಚರನೆ ವಿಚಾರವಾಗಿ ಯಾರೂ ಇದುವರೆಗೂ ಅಧಿಕೃತ ಮಾಹಿತಿಯನ್ನು ಅಥವಾ ಹೇಳಿಕೆಯನ್ನು ನೀಡಿಲ್ಲ. ಇದು ನಾಯಕತ್ವ ಬದಲಾವಣೆ ಚರ್ಚೆಗೆ ತಿರುಗೇಟು ನೀಡಲು ಸಂಪುಟ ಪುನಾರಚನೆ ವಿಚಾರವನ್ನು ಮುನ್ನಲೆಗೆ ತರಲಾಗಿದೆ ಎಂಬ ವಾದವೂ ಇದೆ. ಒಟ್ಟಿನಲ್ಲಿ ನಾಯಕರ ದೆಹಲಿ ಭೇಟಿ, ಪಕ್ಷದ ಮುಖಂಡರ ಹೇಳಿಕೆಗಳು ಹಾಗೂ ಹೈಕಮಾಂಡ್ ನಡೆ ಏನು ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆಲ್ಲಾ ಯಾವಾಗ ತೆರೆ ಬೀಳಲಿದೆ ಎಂಬುದನ್ನು ಕಾದುನೋಡಬೇಕಿದೆ.
from India & World News in Kannada | VK Polls https://ift.tt/2Tsllrd