ಮೈಸೂರು: ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ನಡುವಿನ ವಾಕ್ಸಮರದ ಬೆನ್ನಲ್ಲೇ ಮೈಸೂರಿಗೆ ಆಗಮಿಸಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಪಾಲಿಕೆ ಆಯುಕ್ತರನ್ನು ಪ್ರತ್ಯೇಕವಾಗಿ ಕರೆದು ಮಾಹಿತಿ ಪಡೆದಿದ್ದಾರೆ. ಕೋವಿಡ್ ಸಂಬಂಧ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸಭೆ ನಡೆಸಿದ ಬಳಿಕ, ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ಕರೆಯಿಸಿ ಮಾತನಾಡಿಸಿದ್ದಾರೆ. ಡಿಸಿ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಇದೆಯಾ ಎಂದು ಶಿಲ್ಪಾನಾಗ್ ಅವರಿಗೆ ಪ್ರಶ್ನಿಸಿದ್ದಾರೆ. ‘ಜಿಲ್ಲಾಡಳಿತದ ಕೆಲವು ವಾಟ್ಸಾಪ್ ಗ್ರೂಪ್ನಿಂದ ತಮ್ಮನ್ನು ಏಕಾಏಕಿ ತೆಗೆದು ಹಾಕಿದ್ದಾರೆ’ ಎಂದು ಶಿಲ್ಪಾನಾಗ್ ಹೇಳಿದರು ಎಂದು ತಿಳಿದು ಬಂದಿದೆ. ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಕರೆದಿದ್ದ ಸಭೆಗೆ ಅರ್ಧ ಗಂಟೆ ತಡವಾಗಿ ಆಗಮಿಸಿದ ಶಿಲ್ಪಾನಾಗ್, ಸಭೆಯ ಬಳಿಕ ಪಾಲಿಕೆ ಆಯುಕ್ತರ ಕಾರು ಬಿಟ್ಟು, ಬೇರೊಂದು ಕಾರಿನಲ್ಲಿ ತೆರಳಿದ್ದಾರೆ. ಸಿಎಂಗೆ ವರದಿ: ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಸಂಬಂಧ ಇಬ್ಬರೂ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಮಾಹಿತಿ ಪಡೆದುಕೊಂಡಿರುವ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಮುಖ್ಯ ಮಂತ್ರಿಗಳಿಗೆ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಮಧ್ಯೆ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಅವರು ಶುಕ್ರವಾರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತೆ ಮುಖಾಮುಖಿಯಾದರು. ಪ್ರಾದೇಶಿಕ ಆಯುಕ್ತರಾದ ಡಾ.ಜಿ. ಸಿ. ಪ್ರಕಾಶ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾಧಿಕಾರಿ , ಎಸ್ಪಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಒ ಎ.ಎಂ. ಯೋಗೀಶ್, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಮುಡಾ ಆಯುಕ್ತ ಡಿ.ಬಿ.ನಟೇಶ್, ಉಪ ವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಎಂ.ಎಂ.ಸಿ. ಆರ್.ಐ. ನಿರ್ದೇಶಕ ಹಾಗೂ ಡೀನ್ ಡಾ. ನಂಜರಾಜ, ಡಿಎಚ್ಓ ಡಾ. ಟಿ. ಅಮರನಾಥ್, ಜಿಲ್ಲಾ ಸರ್ಜನ್ ಡಾ. ರಾಜೇಶ್ವರಿ ದೇವಿ ಇದ್ದರು.
from India & World News in Kannada | VK Polls https://ift.tt/3po0DER