ಮಾರುತಿ ಸುಣಗಾರ : ಕೊರೊನಾ ಸೋಂಕಿನ ಎರಡನೇ ಅಲೆ, ಬಳ್ಳಾರಿ ಜಿಲ್ಲೆಯ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ. ಅದರಲ್ಲೂ ತಂದೆ, ತಾಯಿಯ ಆಶ್ರಯ ಪಡೆಯಬೇಕಿದ್ದ ಸೋಂಕಿನಿಂದಾಗಿ ಪಾಲಕರನ್ನು ಕಳೆದುಕೊಂಡು ಕೆಲವರು ಅನಾಥರಾದರೆ, ಬಹುತೇಕರು ಅಥವಾ ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದಾರೆ. ಸಮುದಾಯ ಮಟ್ಟದಲ್ಲೂ ಸೋಂಕು ಹರಡುವ ಮೂಲಕ ಅನೇಕರು ಸೋಂಕಿಗೆ ತುತ್ತಾಗುವಂತೆ ಮಾಡಿದೆ. ಕುಟುಂಬದಲ್ಲೂ ಸೋಂಕು ಕಾಣಿಸಿಕೊಂಡು ಅನೇಕರು ತಮ್ಮ ಸಂಬಂಧಿಕರನ್ನು ಕಣ್ಣೆದುರೇ ಕಳೆದುಕೊಂಡಿರುವಂಥ ಪ್ರಸಂಗಗಳೂ ನಡೆದಿವೆ. ಅದರಲ್ಲೂ 2ನೇ ಅಲೆಯಲ್ಲಿ ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಅನೇಕ ಮಕ್ಕಳು ಪಾಲಕ, ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ಇಷ್ಟು ಮಕ್ಕಳಿಗೆ ಸೋಂಕು: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ 0-18 ವರ್ಷದೊಳಗಿನ ಒಟ್ಟು 1,700 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಸ್ಥಳೀಯ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಬಹುತೇಕರು ಗುಣಮುಖರಾಗಿದ್ದಾರೆ. ಅದರಲ್ಲೂ ಮೂರನೇ ಅಲೆ ವೇಳೆ ಅತೀ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ಭಾಧಿಸಲಿದೆ ಎಂದು ತಜ್ಞರು ಹೇಳುತ್ತಿದ್ದು, ಮಕ್ಕಳ ಮೇಲೆ ತೀವ್ರ ನಿಗಾ ವಹಿಸಲು ಪಾಲಕ, ಪೋಷಕರು ಇನ್ನಿಲ್ಲದ ಜಾಗೃತಿ ವಹಿಸುತ್ತಿದ್ದಾರೆ. ಅತಂತ್ರ ಪರಿಸ್ಥಿತಿ: ಜಿಲ್ಲೆಯಲ್ಲಿ ಒಟ್ಟು 180 ಮಕ್ಕಳು ಕೊರೊನಾ ಸೋಂಕಿನಿಂದಾಗಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ತಂದೆ, ತಾಯಿಯ ಆಶ್ರಯದಲ್ಲಿ ಬೆಳೆಯಬೇಕಿದ್ದ ಮಕ್ಕಳು ಇಂದು ಕೊರೊನಾ ಸೋಂಕುನಿಂದಾಗಿ ಪಾಲಕರನ್ನು ಕಳೆದುಕೊಂಡು ಪೋಷಕರ ಆಶ್ರಯ ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಇನ್ನೂ ಬಹುತೇಕ ತಂದೆ, ತಾಯಿಯಂದಿರು ಕೊರೊನಾ ಸೋಂಕಿಗೆ ತುತ್ತಾಗಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಕ್ಕಳು ತಮ್ಮ ಸಮೀಪದ ಸಂಬಂಧಿಕರು ಅಥವಾ ಪೋಷಕರ ಆಶ್ರಯದಲ್ಲಿದ್ದಾರೆ. ನೆರವಿಗೆ ಧಾವಿಸಿದ ಇಲಾಖೆ: ಕುಟುಂಬಕ್ಕೆ ಆಧಾರವಾಗಿದ್ದ ಪಾಲಕರನ್ನು ಕಳೆದುಕೊಂಡ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೆರವಿಗೆ ಧಾವಿಸಿದೆ. ಈವರೆಗೆ ಬಹುತೇಕ ಬಡ ಕುಟುಂಬದ ಮಕ್ಕಳೇ ತಂದೆ ಅಥವಾ ತಾಯಿಯನ್ನು ಕಳೆದುಕೊಂಡವರಾಗಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ, ಮುಂದಿನ ಶೈಕ್ಷಣಿಕ ಸೇರಿ ಆರ್ಥಿಕ ನೆರವಿಗಾಗಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಒಟ್ಟು 82 ಮಕ್ಕಳು ಇಲಾಖೆಯ ನೆರವು ಕೋರಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಚಾಂದ್ ಪಾಷಾ ತಿಳಿಸಿದ್ದಾರೆ. 'ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಒಟ್ಟು 180 ಮಕ್ಕಳು ತಮ್ಮ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಸದ್ಯ ಕುಟುಂಬದವರ ಆಶ್ರಯದಲ್ಲಿದ್ದಾರೆ. ಮಕ್ಕಳ ಮುಂದಿನ ಶೈಕ್ಷಣಿಕ ನೆರವು ಸೇರಿ ಇಲಾಖೆ ನಾನಾ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಮುಂದಾಗಿದೆ. ಕಂಪ್ಲಿಯಲ್ಲಿ ಕೊರೊನಾ ಸೋಂಕಿಗೆ ಪತಿ, ಪತ್ನಿ ಮೃತರಾಗಿದ್ದು, ಇವರಿಗೆ 17 ವರ್ಷದ ಪುತ್ರಿ, 22 ವರ್ಷದ ಪುತ್ರರಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡ 17 ವರ್ಷದ ಬಾಲಕಿಗೆ ಇಲಾಖೆಯಿಂದ ಮುಂದಿನ ಶೈಕ್ಷಣಿಕ ಹಾಗೂ ಆರ್ಥಿಕ ನೆರವು ಒದಗಿಸಲಾಗುವುದು. 18 ವರ್ಷ ತುಂಬುವವರೆಗೆ ಬಾಲಕಿಗೆ ಪೋಷಕತ್ವ ಯೋಜನೆಯಡಿ ಪ್ರತಿ ತಿಂಗಳು 1 ಸಾವಿರ ರೂ. ಆರ್ಥಿಕ ನೆರವು ನೀಡಲಾಗುವುದು' ಎಂದು ಬಳ್ಳಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ ತಿಳಿಸಿದರು.
from India & World News in Kannada | VK Polls https://ift.tt/34FzOm4