ಹಾವೇರಿ: ಸಚಿವ ಬಿ.ಸಿ.ಪಾಟೀಲ್ಗೆ ಮನೆಯಲ್ಲಿ ಲಸಿಕೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರೇಕೆರೂರು ಟಿಹೆಚ್ಒ ಡಾ.ಝಡ್.ಆರ್. ಮಕಾಂದಾರ್ ಅವರನ್ನು ಅಮಾನತು ಮಾಡಿ ಆರೋಗ್ಯ, ಕುಟುಂಬ ಕಲ್ಯಾಣ ಸೇವೆ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಸಚಿವ ಬಿ.ಸಿ.ಪಾಟೀಲ್ ಮನೆಗೆ ಹೋಗಿ ಆರೋಗ್ಯ ಸಿಬ್ಬಂದಿ ಲಸಿಕೆ ನೀಡಿದ್ದರು. ಈ ಸಂಬಂಧ ಕಳೆದ ಒಂದು ತಿಂಗಳ ಹಿಂದೆ ಡಿಹೆಚ್ಓ ತಾಲೂಕು ಆರೋಗ್ಯಾಧಿಕಾರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದರು. ಈಗ ಟಿಹೆಚ್ಒ ಡಾ. ಮಕಾಂದಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಬಿದ್ದಿದೆ. ಮಾರ್ಚ್ 2ರಂದು ಬಿ.ಸಿ. ಪಾಟೀಲ್ ಆರೋಗ್ಯ ಸಿಬ್ಬಂದಿಯನ್ನು ತಮ್ಮ ಮನೆಗೆ ಕರೆಸಿ ಹಾಕಿಸಿಕೊಂಡಿದ್ದರು. ಸಚಿವರ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಎಲ್ಲರಿಗೂ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಸೂಚನೆ ನೀಡಲಾಗಿದೆ. ಆದ್ರೆ ಸಚಿವ ಬಿ.ಸಿ.ಪಾಟೀಲ್ ತಮ್ಮದೇ ನಿಯಮವನ್ನು ರೂಪಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾ ಆರ್ಸಿಹೆಚ್ ಡಾ.ಜಯಾನಂದ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ನೋಟಿಸ್ ಜಾರಿ ಮಾಡಿದ್ದರು. ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಸಚಿವ ಬಿ.ಸಿ ಪಾಟೀಲ್, ತನಗೆ ಲಸಿಕೆ ಆಸ್ಪತ್ರೆಯಲ್ಲಿ ಪಡೆಯಬೇಕು ಎನ್ನುವುದು ತಿಳಿದಿರಲಿಲ್ಲ ಎಂದಿದ್ದರು.
from India & World News in Kannada | VK Polls https://ift.tt/31Mag57