ಸಾಗರ್: ನಾಯಿಯನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನಲಾಗುತ್ತದೆ. ಈ ಪ್ರಸಂಗ ನೋಡಿದರೆ ಮನುಷ್ಯನು ಕೂಡ ನಾಯಿಯ ಉತ್ತಮ ಸ್ನೇಹಿತ ಎನ್ನಬೇಕಾಗುತ್ತದೆ. ಕಾರಣ ಅನಾಥವಾಗಿದ್ದ ನಾಯಿಯ ಸ್ಥಿತಿಗೆ ಮಮ್ಮುಲ ಮರುಗಿದ ಪೊಲೀಸರು ನಾಯಿಗೆ ಠಾಣೆಯಲ್ಲಿಯೇ ಆಶ್ರಯ ನೀಡಿದ್ದಾರೆ. ಸುಲ್ತಾನ್ ಹೆಸರಿನ ಲ್ಯಾಬ್ರಡಾರ್ ನಾಯಿಯನ್ನು ಸಾಕಿದ್ದ ಮನೆಯ ಎಲ್ಲ ಸದಸ್ಯರು ಹತ್ಯೆ ಆರೋಪದ ಮೇಲೆ ಜೈಲು ಪಾಲಾಗಿದ್ದಾರೆ. ಪರಿಣಾಮ ಮನೆಯಲ್ಲಿ ಅನಾಥವಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಬಜಾರಿಯಾ ಠಾಣಾಧಿಕಾರಿ ಮನಿಶ್ ತಿವಾರಿ ಅದರ ಜವಾಬ್ದಾರಿ ಹೊರಲು ನಿರ್ಧರಿಸಿದ್ದಾರೆ. ಸುಲ್ತಾನ್ ಸಾಕಿದ್ದ ಮನೆಯ ಸದಸ್ಯರ ಮೇಲೆ 5 ಕೊಲೆ ಮಾಡಿದ ಆರೋಪವಿದೆ. ಬಾಯಾರಿಕೆ ಮತ್ತು ಹಸಿವಿಂದ ಕಂಗೆಟ್ಟಿದ್ದ ನಾಯಿ , ನಾವು ಅಲ್ಲಿಗೆ ಹೋಗುತ್ತಿದ್ದಂತೆ ಮೈಮೇಲೆ ಎರಗಲು ಪ್ರಯತ್ನಿಸಿತು. ಬಳಿಕ ಊಟ ಕೊಟ್ಟು ಸ್ನೇಹ ಸಂಪಾದಿಸಿದೆವು. ನೆರೆಮನೆಯವರ ಬಳಿ ನಾಯಿಯನ್ನು ನೋಡಿಕೊಳ್ಳುತ್ತೀರ ಎಂದು ಕೇಳಿದಾಗ ಅವರೊಪ್ಪಲಿಲ್ಲ. ಹೀಗಾಗಿ ನಾಯಿಯನ್ನು ಠಾಣೆಯಲ್ಲಿಯೇ ಇಟ್ಟುಕೊಂಡಿದ್ದೇವೆ, ಎನ್ನುತ್ತಾರೆ ತಿವಾರಿ. ಬ್ರೆಡ್, ಹಾಲು, ಚಪಾತಿ ತಿನ್ನಿಸಿ ಠಾಣೆಯಲ್ಲಿ ಇಟ್ಟುಕೊಂಡಿದ್ದೇವೆ. ಕರ್ತವ್ಯಕ್ಕೆ ಹಾಜರಾಗುತ್ತಿದ್ದಂತೆ ಖುಷಿಯಿಂದ ಬಾಲ ಅಲ್ಲಾಡಿಸುತ್ತ ಸ್ವಾಗತಿಸುವ ಸುಲ್ತಾನ್ ನಮ್ಮೆಲ್ಲರ ಅಚ್ಚುಮೆಚ್ಚು. ಅವನನ್ನು ಪ್ರೀತಿಯಿಂದ ಸಾಕುವವರು ಸಿಗುವವರೆಗೂ ಠಾಣೆಯಲ್ಲಿಯೇ ಇಟ್ಟುಕೊಳ್ಳುತ್ತೇವೆ, ಎಂದು ತಿವಾರಿ ಹೇಳಿದ್ದಾರೆ.
from India & World News in Kannada | VK Polls https://ift.tt/328WvN6