ಹೊಸದಿಲ್ಲಿ: ನಾಯಕ ಅವರನ್ನು ಆಧುನಿಕ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ ಎಂದೇ ಬಿಂಬಿಸಲಾಗಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿರುವ ಸ್ವತ: ವಿರಾಟ್ ಕೊಹ್ಲಿ ಅವರಿಗೂ ಸ್ಥಿರತೆ ಹಾಗೂ ಯಶಸ್ಸನ್ನು ಪುನರಾವರ್ತಿಸುವುದು ಬೋರಿಂಗ್ ಕೆಲಸವಂತೆ! ಈ ಬಗ್ಗೆ ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಿಮ್ಮ ಕ್ರಿಕೆಟ್ ಪ್ರಯಾಣವನ್ನು ಹೇಗೆ ಅವಲೋಕಿಸುವೀರಾ ಎಂಬ ಪ್ರಶ್ನೆಗೆ ಉತ್ತರವಾಗಿ, ಕಠಿಣ ಪರಿಶ್ರಮವನ್ನು ತೊರೆದರೆ ಪ್ರಯಾಣ ಮುಕ್ತಾಯವಾಗಲಿದೆ ಎಂದು ಒಂದೇ ವಾಕ್ಯದಲ್ಲಿ ಉತ್ತರಿಸಿದರು. ಅಲ್ಲಿ ಬೇರೆ ಯಾವುದೇ ಆಯ್ಕೆಗಳಿಲ್ಲ. ದೈನಂದಿನ ಬೆಳಗ್ಗೆ ಎದ್ದು ಕಠಿಣ ಪರಿಶ್ರಮವನ್ನು ಮಾಡಬೇಕು. ಅದೇ ಕೆಲಸಗಳನ್ನು ಮತ್ತೆ ಮತ್ತೆ ಮಾಡಬೇಕು. ಸ್ಥಿರತೆ ಮತ್ತು ಯಶಸ್ಸನ್ನು ಪದೇ ಪದೇ ಪುನರಾವರ್ತಿಸಬೇಕು. ನಿಜವಾಗಿಯೂ ಇದು ಬೋರಿಂಗ್. ಸ್ಥಿರತೆ ಬೋರ್ ಹೊಡೆಸುತ್ತದೆ. ಇದು ಕಠಿಣ. ಇದು ಒಂದು ವಲಯದಲ್ಲಿದ್ದುಕೊಂಡು ಪುನರಾರ್ತಿಸುವುದಾಗಿದೆ ಎಂದರು. ಇದಕ್ಕೆ ಅಮೆರಿಕದ ಗಾಲ್ಫ್ ಕ್ರೀಡೆಯನ್ನು ಉದಾಹರಣೆಯಾಗಿ ನೀಡಿದ ಕೊಹ್ಲಿ, ಒತ್ತಡಗಳನ್ನು ನಿಭಾಯಿಸಲು ನಿರಂತರ ಅಭ್ಯಾಸದಿಂದ ಮಾತ್ರ ಸಾಧ್ಯ ಎಂದರು. ತಾವು ಸಮರ್ಪಕ ಉದ್ದೇಶದೊಂದಿಗೆ ಕ್ರಿಕೆಟ್ ಆಡುವುದಾಗಿ ಒತ್ತಿ ಹೇಳಿರುವ ಕೊಹ್ಲಿ, ಯಾರನ್ನು ಸಂತುಷ್ಟಗೊಳಿಸಲು ಆಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಅಂತಿಮವಾಗಿ ಜೀವನವು ಕ್ರಿಕೆಟ್ಗಿಂತ ದೊಡ್ಡದಾಗಿದೆ ಎಂಬುದನ್ನು ಅರಿತುಕೊಳ್ಳುತ್ತೇವೆ. ಓರ್ವ ವೃತ್ತಿಪರ ಕ್ರಿಕೆಟಿಗನಾಗಿ ನಾನೀಗ ಈ ಹಂತದಲ್ಲಿದ್ದೇನೆ. ಜೀವನದಲ್ಲಿ ನನ್ನ ಪತ್ನಿ ಹಾಗೂ ಕುಟುಂಬಕ್ಕೆ ಇದೇ ತರಹದ ಪ್ರಾಮುಖ್ಯತೆ ನೀಡಬೇಕಾಗಿದೆ. ಇವೆಲ್ಲವೂ ನಿಮ್ಮ ಜೀವನದ ಆದ್ಯತೆಗಳಾಗಿವೆ. ಒಂದು ದಿನ ಇವೆಲ್ಲವೂ ಕೊನೆಗೊಳ್ಳಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಆಧ್ಮಾತ್ಮಿಕವಾಗಿ ಉತ್ತರಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GszYS0