ಹೊಸದಿಲ್ಲಿ: ಭಯೋತ್ಪಾದನೆ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ (ಯುಎಪಿಎ)ವನ್ನು ಲೋಕಸಭೆ ಅಂಗೀಕರಿಸಿದೆ. ವಿಧೇಯಕದ ಬಗ್ಗೆ ಸುದೀರ್ಘ ಚರ್ಚೆ ವೇಳೆ ಗೃಹಸಚಿವ ಅಮಿತ್ ಶಾ, ಭಯೋತ್ಪಾದನೆ ಬಗ್ಗೆ ಸರಕಾರ 'ಶೂನ್ಯ ಸಹನೆ' ನೀತಿ ಅನುಸರಿಸುತ್ತದೆ ಎಂದರು. ಯಾವುದೇ ರೀತಿಯ ಓಲೈಕೆ ರಾಜಕಾರಣ ಮಾಡುವುದಿಲ್ಲ; ಭಯೋತ್ಪಾದನೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲು ಎನ್ಡಿಎ ಸರಕಾರ ಕಠಿಣ ಕ್ರಮಗಳನ್ನೇ ಕೈಗೊಳ್ಳಲಿದೆ ಎಂದು ಸಾರಿದರು. ಉಗ್ರರಿಗೆ ಹಣಕಾಸು ನೀಡುವವರನ್ನು, ಉಗ್ರರ ಪರವಾಗಿ ಬರೆಯುವವರನ್ನೂ ಭಯೋತ್ಪಾದಕರೆಂದೇ ಘೋಷಿಸಲಾಗುವುದು ಎಂದು ಶಾ ನುಡಿದರು. ನಗರ ನಕ್ಸಲರ ವಿರುದ್ಧ ಯಾವುದೇ ರಿಯಾಯಿತಿ ತೋರುವುದಿಲ್ಲ ಎಂದು ಘೋಷಿಸಿದರು. ಭಯೋತ್ಪಾದನೆ ಎಂಬುದು ಒಂದು ಸಂಸ್ಥೆಯಲ್ಲ, ಅದು ಒಬ್ಬ ವ್ಯಕ್ತಿಯ ಮನಸ್ಥಿತಿ. ಹಾಗಾಗಿಯೇ ಭಯೋತ್ಪಾದನೆಯನ್ನು ನಿಗ್ರಹಿಸಲೇಬೇಕಿದೆ ಎಂದು ಅಮಿತ್ ಶಾ ಪ್ರತಿಪಾದಿಸಿದರು. ಕಾನೂನು ಯಾರು ಮಾಡಿದ್ದಾರೆ ಎಂದು ನೀವು ಯೋಚಿಸುವುದಿಲ್ಲ; ಇರುವ ಕಾನೂನನ್ನೇ ನಾವು ಮತ್ತಷ್ಟು ಬಲಪಡಿಸಲು ಹೊರಟರೆ ನಮ್ಮನ್ನು ದೂಷಿಸುತ್ತೀರಿ. ವಾಸ್ತವದಲ್ಲಿ ಯುಎಪಿಎ ಕಾನೂನು ತಂದವರು ನೀವೇ. ನೀವು ಅಧಿಕಾರದಲ್ಲಿದ್ದಾಗ ತಂದ ಕಾನೂನನ್ನೇ ಈಗ ನಾವು ಮತ್ತಷ್ಟು ಬಲಿಷ್ಠಗೊಳಿಸುತ್ತಿದ್ದೇವೆ ಅಷ್ಟೆ' ಎಂದು ಗೃಹಸಚಿವರು ಪ್ರತಿಪಾದಿಸಿದರು. ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಕ್ಷ ರಾಜಕಾರಣದ ಹಿತಾಸಕ್ತಿಗಳನ್ನು ಮೀರಿ ನಾವು ಕೆಲಸ ಮಾಡಬೇಕಿದೆ. ಈ ಕಾಯ್ದೆ ನಮ್ಮ ತನಿಖಾ ಸಂಸ್ಥೆಗಳನ್ನು ಉಗ್ರರಿಗಿಂತ ನಾಲ್ಕು ಹೆಜ್ಜೆ ಮುಂದಿರಿಸುತ್ತದೆ ಎಂದು ಶಾ ನುಡಿದರು. ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಘೋಷಿಸುವ ಕಾನೂನು ಅಗತ್ಯವಿದೆ. ವಿಶ್ವಸಂಸ್ಥೆ, ಅಮೆರಿಕ, ಪಾಕಿಸ್ತಾನ, ಚೀನಾ ಇಸ್ರೇಲ್, ಐರೋಪ್ಯ ಒಕ್ಕೂಟ- ಹೀಗೆ ಪ್ರತಿಯೊಂದು ದೇಶಗಳು ಇಂತಹ ಕಾನೂನು ಹೊಂದಿವೆ. ಆದ್ದರಿಂದ ನಮಗೂ ಈ ಕಾನೂನಿನ ಅಗತ್ಯವಿದೆ ಎಂದು ಅಮಿತ್ ಶಾ ನುಡಿದರು. ಇದಕ್ಕೆ ಮುನ್ನ ವಿಧೇಯಕವನ್ನು ವಿರೋಧಿಸಿ ಬಿಎಸ್ಪಿಯ ಡ್ಯಾನಿಶ್ ಆಲಿ, ತೃಣಮೂಲ ಕಾಂಗ್ರೆಸ್ನ ಮಹುವಾ ಮಿತ್ರಾ, ಅಸಾದುದ್ದೀನ್ ಓವೈಸಿ ವಿರೋಧಿಸಿದರು. ಓವೈಸಿ ಮಾತನಾಡುತ್ತ, 'ಈ ಕಾನೂನು ತರುವಂತೆ ಅನಿವಾರ್ಯತೆ ಸೃಷ್ಟಿಸಿದ್ದು ಕಾಂಗ್ರೆಸ್. ಅದು ಅಧಿಕಾರದಲ್ಲಿದ್ದಾಗ ಬಿಜೆಪಿಗಿಂತಲೂ ಹೆಚ್ಚು ದೊಡ್ಡಣ್ಣನಂತೆ ವರ್ತಿಸಿತು. ಅಧಿಕಾರ ಕಳೆದುಕೊಂಡ ಬಳಿಕ ಮುಸ್ಲಿಮರ ದೊಡ್ಡಣ್ಣನಂತೆ ಮಾತನಾಡುತ್ತಿದೆ' ಎಂದು ಟೀಕಿಸಿದರು.
from India & World News in Kannada | VK Polls https://ift.tt/2y6I3Y7