ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಅಪಾರ ಕೊಡುಗೆಗಳನ್ನು ಸಲ್ಲಿಸಿರುವ ವಿಶಿಷ್ಟ ಶೈಲಿಯ ಬಲಗೈ ಅನುಭವಿ ವೇಗದ ಬೌಲರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಸಜ್ಜಾಗಿದ್ದಾರೆ. ಶ್ರೀಲಂಕಾದ ಹಿರಿಯ ವೇಗದ ಬೌಲರ್ ಲಸಿತ್ ಮಾಲಿಂಗ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣಾರತ್ನೆ ಖಚಿತಪಡಿಸಿದ್ದಾರೆ. ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ದಿಮುತ್, 35 ವರ್ಷದ ಹಿರಿಯ ಬೌಲರ್ ಮೊದಲ ಪಂದ್ಯದ ಬಳಿಕ ನಿವೃತ್ತಿಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಜುಲೈ 26, 28 ಮತ್ತು 31ರಂದು ನಡೆಯಲಿರುವ ಸರಣಿಗೆ ಪ್ರಕಟಿಸಲಾದ 22 ಸದಸ್ಯರ ಶ್ರೀಲಂಕಾ ತಂಡದಲ್ಲಿ ಮಾಲಿಂಗ ಸ್ಥಾನ ಪಡೆದಿದ್ದಾರೆ. ಏಕದಿನದಲ್ಲಿ ಶ್ರೀಲಂಕಾದ ಪರ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಮಾಲಿಂಗ 219 ಇನ್ನಿಂಗ್ಸ್ಗಳಲ್ಲಿ 335 ವಿಕೆಟುಗಳನ್ನು ಕಬಳಿಸಿದ್ದಾರೆ. ಮಾಜಿ ಆಟಗಾರರಾದ ಮುತ್ತಯ್ಯು ಮುರಳೀಧರನ್ (534) ಹಾಗೂ ಚಾಮಿಂಡ ವಾಸ್ (400) ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ. ಇತ್ತೀಚೆಗಷ್ಟೇ ಸಾಗಿದ ಏಕದಿನ ವಿಶ್ವಕಪ್ನಲ್ಲೂ ಶ್ರೀಲಂಕಾ ಪರ ಗರಿಷ್ಠ 13 ವಿಕೆಟುಗಳನ್ನು ಕಬಳಿಸಿದ್ದರು. 2011ರಲ್ಲೇ ಟೆಸ್ಟ್ ಕ್ರಿಕೆಟ್ಗೆ ಮಾಲಿಂಗ ನಿವೃತ್ತಿ ಘೋಷಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2M879hA