ಶಶಿಧರ ಹೆಗಡೆ ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಎರಡು ಕಡೆ ಗೆದ್ದಿರಬಹುದು. ಆದರೆ, ಪ್ರಯಾಸಕರವಾದ ಈ ಗೆಲುವು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಘಾಸಿಗೊಳಿಸಿದೆ. ಅದೇ ಕಾಲಕ್ಕೆ ಪರಸ್ಪರ ಕಾಲೆಳೆದುಕೊಳ್ಳುತ್ತ ಕಲಹದಲ್ಲಿ ತೊಡಗಿರುವ ಪಕ್ಷದ ಮುಖಂಡರಲ್ಲಿ ಕೆಲವರಿಗಾದರೂ ಖುಷಿಯಾಗಿರುವ ಸಾಧ್ಯತೆಯಂತೂ ನಿಚ್ಚಳ. ಹತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಇದರ ಬೆನ್ನಿಗೇ ಉಪ ಚುನಾವಣೆ ಫಲಿತಾಂಶ ಬಂದಿದೆ. ಬೆಳಗಾವಿಯಲ್ಲಿ ಬಿಜೆಪಿ ಜಯ ದಾಖಲಿಸಿದರೂ ಅದು ಅರ್ಹ ಗೆಲುವಲ್ಲ. ಕಾಂಗ್ರೆಸ್ ಸೋತಿದ್ದರೂ ಅದನ್ನು ವೀರೋಚಿತ ಸೋಲು ಎಂದು ಪರಿಗಣಿಸಲಾಗುತ್ತಿದೆ. ಬಸವಕಲ್ಯಾಣದಲ್ಲಿ ಗುಂಪುಗಾರಿಕೆ ಹೊರತಾಗಿಯೂ ಬಿಜೆಪಿಗೆ ಯಶಸ್ಸು ಸಿಕ್ಕಿರುವುದು ನೆಮ್ಮದಿ ವಿಚಾರ. ಮಸ್ಕಿ ಅಖಾಡ ಬಿಜೆಪಿಗೆ ಕಠಿಣವಾಗಿದೆ ಎಂಬ ವಾರ್ತೆ ಮೊದಲೇ ಇತ್ತು. ಈ ಸವಾಲು ದಾಟುವುದರಲ್ಲಿ ಬಿಜೆಪಿ ಸಫಲವಾಗಿಲ್ಲ ಎನ್ನಬಹುದು. ಆದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆದ್ದಿರುವುದನ್ನು ಅರಗಿಸಿಕೊಳ್ಳಲು ಬಿಜೆಪಿಗೆ ಸಮಯ ಬೇಕಾಗಬಹುದು. ಉಪ ಚುನಾವಣೆಯನ್ನು ಸರಕಾರದ ವಿರುದ್ಧದ ಜನಮತವೆಂದು ಸ್ವೀಕರಿಸುವ ರೂಢಿಯಿಲ್ಲ. ಬೈ ಎಲೆಕ್ಷನ್ನಲ್ಲಿ ಆಡಳಿತ ಪಕ್ಷ ಮುನ್ನಡೆ ಸಾಧಿಸುವುದು ಸಹಜವೆಂಬ ಮಾತೂ ಇದೆ. ಎಲ್ಲೋ ಅಪರೂಪಕ್ಕೆ ಎಂಬಂತೆ ಪ್ರತಿಪಕ್ಷಗಳು ಮಿಂಚಿದಾಗ ಅದು ಚರ್ಚೆಗೆ ಆಸ್ಪದ ಕಲ್ಪಿಸುತ್ತದೆ. ಸರಕಾರದ ವಿರುದ್ಧ ಹೋರಾಟ ಮಾಡಲು ಪ್ರತಿಪಕ್ಷ-ಗಳಿಗೂ ಹುಮ್ಮಸ್ಸು ಬರುತ್ತದೆ. ಈ ಬಾರಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಮೂರು ಕ್ಷೇತ್ರಗಳ ಉಪ ಚುನಾವಣೆಯಿಂದ ಪ್ರತಿಪಕ್ಷ ಕಾಂಗ್ರೆಸ್ನಲ್ಲಿ ಅಂತಹ ಒಂದು ವಾತಾವರಣ ನಿರ್ಮಾಣವಾಗಿದೆ. 2023ರ ಮೇ ತಿಂಗಳಲ್ಲಿ ಹಾಲಿ ವಿಧಾನಸಭೆಯ ಅವಧಿ ಮುಕ್ತಾಯವಾಗುತ್ತದೆ. ಹಾಗಾಗಿ ಸಾರ್ವತ್ರಿಕ ಚುನಾವಣೆಗೆ ಇನ್ನೂ 2 ವರ್ಷ ಟೈಮ್ ಇದೆಯೆಂದು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಆಗುವುದಿಲ್ಲ. ಚುನಾವಣೆ ಯಾವತ್ತಾದರೂ ಬರಬಹುದು ಎಂಬ ನಿರೀಕ್ಷೆಯಲ್ಲೆ ರಾಜಕೀಯ ಪಕ್ಷಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಮುಂಬರುವ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ಗೆ ಈಗ ದಾರಿ ತೆರೆದುಕೊಂಡಂತಾಗಿದೆ. ಬಿಜೆಪಿಗೆ ಎಚ್ಚರಿಕೆ ಸಂದೇಶ: ಖಂಡಿತವಾಗಿಯೂ ಈ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಖಡಕ್ ಎಚ್ಚರಿಕೆಯಿದೆ. ಬೆಳಗಾವಿ ಲೋಕಸಭೆ ಕ್ಷೇತ್ರ ಸಾಂಪ್ರದಾಯಿಕವಾಗಿ ಬಿಜೆಪಿಯ ಭದ್ರಕೋಟೆ. ಈ ಕ್ಷೇತ್ರದಲ್ಲಿ ಏದುಸಿರು ಬಿಡುತ್ತ ಬಿಜೆಪಿ ದಡ ಸೇರುತ್ತದೆಯೆಂದರೆ ಎಲ್ಲವೂ ಸರಿಯಿಲ್ಲವೆಂದೇ ಅರ್ಥ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದ ಹಿನ್ನೆಲೆಯಲ್ಲಿ ತೆರವಾದ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಲವು ಆಕಾಂಕ್ಷಿಗಳಿದ್ದರು. ಯಾವಾಗ ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಹೆಸರು ಅಂತಿಮಗೊಳಿಸಲಾಯಿತೋ ಆಗಲೇ ಬಿಜೆಪಿ ದಿಗಿಲು ಬಿದ್ದಿತು. ಹಾಗಾಗಿ ಅನುಕಂಪದ ಅಲೆ ನೆಚ್ಚಿಕೊಳ್ಳಲು ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರನ್ನು ಸ್ಪರ್ಧೆಗಿಳಿಸಲಾಯಿತು. ಹಿರಿಯ ಸಚಿವ ಜಗದೀಶ ಶೆಟ್ಟರ್ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಕೇರಳ ಚುನಾವಣೆ ಮುಗಿಯುತ್ತಿದ್ದಂತೆ ಬೆಳಗಾವಿಗೆ ಬಂದಿದ್ದರು. ಇನ್ನು ಮಂಗಳಾ ಅಂಗಡಿ ಪರ ಕೆಲಸ ಮಾಡಲು ರಾಜ್ಯ ಬಿಜೆಪಿಯಿಂದ ದೊಡ್ಡ ತಂಡವನ್ನೇ ನಿಯೋಜಿಸಲಾಗಿತ್ತು. ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಎರಡು ಬಾರಿ ಭೇಟಿ ನೀಡಿದ್ದರು. ಪ್ರಚಾರದ ಕಡೆಯ ಚರಣದಲ್ಲಿ ಸಿಎಂ ಅಸ್ವಸ್ಥರಾಗಿದ್ದರು. ಇಷ್ಟರ ಹೊರತಾಗಿಯೂ ಬೆಳಗಾವಿಯಲ್ಲಿ ಕಡಿಮೆ ಅಂತರದಿಂದ ಬಿಜೆಪಿ ಗೆಲುವು ಕಂಡಿದೆ. ಎಂಇಎಸ್ ಪ್ರತ್ಯೇಕವಾಗಿ ಕಣಕ್ಕಿಳಿದಿರುವುದನ್ನು ಇದಕ್ಕೆ ಕಾರಣವಾಗಿ ನೀಡಬಹುದಾದರೂ ಸತೀಶ್ ಜಾರಕಿಹೊಳಿ ವೈಯಕ್ತಿಕ ವರ್ಚಸ್ಸು ಬಿಜೆಪಿಯನ್ನು ಕಟ್ಟಿ ಹಾಕಿರುವುದು ನಿಸ್ಸಂಶಯ. ಹಾಗಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ 3.87 ಲಕ್ಷ ಮತಗಳ ಅಂತರದಿಂದ ಜಯಭೇರಿ ಮೊಳಗಿಸಿದ್ದ ಬಿಜೆಪಿ ಈ ಬಾರಿ ತನ್ನ ಗೆಲುವನ್ನು ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದೆ. ಕಾಂಗ್ರೆಸ್ಗೆ ದಿಕ್ಸೂಚಿ: ಕಾಂಗ್ರೆಸ್ಗೆ ಈ ಉಪ ಚುನಾವಣೆ ಫಲಿತಾಂಶದ ಮೂಲಕ ಭವಿಷ್ಯದ ರಾಜಕಾರಣದ ದಿಕ್ಸೂಚಿ ಕಾಣಿಸತೊಡಗಿದೆ. ಮಸ್ಕಿಯಲ್ಲಿ ಬಿಜೆಪಿಯ ಬಸನಗೌಡ ತುರವೀಹಾಳ್ ಅವರನ್ನು ಕರೆತಂದು ಟಿಕೆಟ್ ನೀಡಿದ ಕಾಂಗ್ರೆಸ್ನ ತಂತ್ರಗಾರಿಕೆ ಕ್ಲಿಕ್ ಆಗಿದೆ. ಪ್ರತಾಪ್ಗೌಡ ಪಾಟೀಲ್ ವಿರುದ್ಧದ ಆಕ್ರೋಶವೂ ಇದಕ್ಕೆ ಕಾರಣ. ಹಾಗಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರಿಶ್ರಮಕ್ಕೆ ಯಶಸ್ಸು ಸಿಕ್ಕಿಲ್ಲ. ಬಸವಕಲ್ಯಾಣದಲ್ಲಿ ಜೆಡಿಎಸ್ನ ಅಲ್ಪಸಂಖ್ಯಾತ ಅಭ್ಯರ್ಥಿಯಿಂದ ಕಾಂಗ್ರೆಸ್ಗೆ ತೊಂದರೆಯಾದದ್ದು ನಿಜ. ಬೆಳಗಾವಿಯಲ್ಲಿ ಈ ಮಟ್ಟದ ಫೈಟ್ ಕೊಡುವ ವಿಶ್ವಾಸ ಕಾಂಗ್ರೆಸ್ನಲ್ಲಿ ಮೊದಲು ಇರಲೇ ಇಲ್ಲ. ಸತೀಶ್ ಜಾರಕಿಹೊಳಿ ಕೂಡ ಮನಸ್ಸಿಲ್ಲದ ಮನಸ್ಸಿನಿಂದ ಕಣಕ್ಕಿಳಿದಿದ್ದರು. ಆದರೆ, ಕ್ಷೇತ್ರದ ಜನತೆಯ ಸ್ಪಂದನೆ ನೋಡಿ ಕಾಂಗ್ರೆಸ್ನಲ್ಲಿ ಭರವಸೆ ಮೂಡುವಂತಾಗಿದೆ. ಹಾಗಾಗಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ, ಉಪ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಸಂಘಟನೆಗೆ ಚುರುಕು ಮುಟ್ಟಿಸಲು ಸಹಾಯಕವಾಗಲಿದೆ. ಇನ್ನು ಮಸ್ಕಿ ಉಪ ಚುನಾವಣೆಗೆ ತೆರೆ ಬೀಳುವುದರೊಂದಿಗೆ 'ಆಪರೇಷನ್ ಕಮಲ'ದ ಕೋಟಾದ ಚುನಾವಣೆ ಅಂತ್ಯಗೊಂಡಂತಾಗಿದೆ. ಈ ಪೈಕಿ ಪ್ರತಾಪ್ಗೌಡ ಪಾಟೀಲ್ ಸೇರಿದಂತೆ ಎಚ್.ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಸೋತಿದ್ದಾರೆ. ಆರ್. ಶಂಕರ್ ಸ್ಪರ್ಧೆ ಮಾಡಿರಲಿಲ್ಲ. ಉಳಿದಂತೆ 11 ಮಂದಿ ಗೆಲುವು ದಾಖಲಿಸಿದ್ದಾರೆ.
from India & World News in Kannada | VK Polls https://ift.tt/3aW1ve3