ಮೇಕೆದಾಟು ಪಾದಯಾತ್ರೆಯ ಸಮಾರೋಪಕ್ಕೆ ಹರಿದುಬಂದ ಜನಸಾಗರ; ಟ್ರಾಫಿಕ್‌ ಬಿಸಿಗೆ ನಲುಗಿದ ಬೆಂಗಳೂರು

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕರು ಕೈಗೊಂಡಿದ್ದ ಎರಡನೇ ಹಂತದ ಪಾದಯಾತ್ರೆಯ ಕೊನೆಯ ದಿನ ಜನಸಾಗರವೇ ಹರಿದುಬಂದಿದ್ದು, ಹೀಗಾಗಿ ನಗರದ ನಾನಾ ಭಾಗಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿ ಗಂಟೆಗಟ್ಟಲೆ ನಡು ರಸ್ತೆಯಲ್ಲೇ ನಿಂತು ಪರದಾಡುವಂತಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾವಿರಾರು ಮಂದಿ ಗುರುವಾರ ಬೆಳಗ್ಗೆಯಿಂದಲೇ ಪಾದಯಾತ್ರೆ ನಡೆಸಿದ ಪರಿಣಾಮ, ಪಾದಯಾತ್ರೆ ಸಾಗುವ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು, ಸರಕಾರಿ ನೌಕರರು, ಕಾರ್ಮಿಕರು ಹಾಗೂ ಸಾರ್ವಜನಿಕರು ನಿಗದಿತ ಸಮಯಕ್ಕೆ ತಮ್ಮ ಸ್ಥಳ ತಲುಪಲಾಗದೆ ಆಕ್ರೋಶ ಹೊರಹಾಕಿದರು. ಸಾವಿರಾರು ಮಂದಿಯೊಂದಿಗೆ ಕಾವೇರಿ ಥಿಯೇಟರ್‌ನಿಂದ ಪ್ರಾರಂಭವಾದ ಪಾದಯಾತ್ರೆ ಸ್ಯಾಂಕಿ ಟ್ಯಾಂಕ್‌ ರಸ್ತೆ ಮೂಲಕ ಮಲ್ಲೇಶ್ವರ 18ನೇ ಕ್ರಾಸ್‌ ಮೂಲಕ ಸಾಗಿ ಮಾರ್ಗೋಸಾ ರಸ್ತೆ ತಲುಪಿತು. ಕೆ.ಸಿ. ಜನರಲ್‌ ಆಸ್ಪತ್ರೆ ರಸ್ತೆಯಲ್ಲಿ ಮುಂದುವರಿದು ಲಿಂಕ್‌ ರಸ್ತೆಮಾರ್ಗವಾಗಿ ಶೇಷಾದ್ರಿಪುರ, ರಾಜೀವ್‌ಗಾಂ ಪ್ರತಿಮೆ ತಲುಪಿ, ಫ್ಲಾಟ್‌ಫಾರಂ ರಸ್ತೆಯಿಂದ ಮುಂದೆ ಸಾಗಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮಾರ್ಗವಾಗಿ, ಕಾಟನ್‌ಪೇಟೆ ಮುಖ್ಯರಸ್ತೆ ಸೇರಿತು. ಅಲ್ಲಿಂದ ಬ್ರಿಯಾಂಡ್‌ ವೃತ್ತ ತಲುಪಿ, ರಾಯನ್‌ ವೃತ್ತದಲ್ಲಿ ಸಾವಿರಾರು ಮಂದಿ ಸಮಾವೇಶಗೊಂಡರು. ಈದ್ಗಾ ಮೈದಾನದಲ್ಲಿಊಟ ಮಾಡಿದ ಪಾದಯಾತ್ರಿಗಳು ತಮ್ಮ ಯಾತ್ರೆ ಮುಂದುವರಿಸಿ ಅಂತಿಮವಾಗಿ ನ್ಯಾಷನಲ್‌ ಕಾಲೇಜಿನ ಆಟದ ಮೈದಾನ ತಲುಪಿದರು. ಹಾಗಾಗಿ, ಈ ಮಾರ್ಗದ ಎಲ್ಲ ರಸ್ತೆಗಳಲ್ಲೂ ಪಾದಯಾತ್ರೆ ಸಮಯದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿತ್ತು. ಪಾದಯಾತ್ರೆ ಸಾಗುವ ಮಾರ್ಗವಲ್ಲದೆ, ಅಕ್ಕಪಕ್ಕದ ರಸ್ತೆಗಳು, ಇಕ್ಕೆಲಗಳು ವಾಹನಗಳಿಂದ ತುಂಬಿ ಬೆಂಗಳೂರಿಗರಿಗೆ ಟ್ರಾಫಿಕ್‌ನ ಬಿಸಿ ತಟ್ಟಿತು. ಎಲ್ಲೆಲ್ಲಿ ಟ್ರಾಫಿಕ್‌ ಜಾಮ್‌:ಕಾವೇರಿ ಥಿಯೇಟರ್‌ನಿಂದ ಪಾದಯಾತ್ರೆ ಪ್ರಾರಂಭವಾದ ಕಾರಣ ಮೇಖ್ರಿ ವೃತ್ತ, ಬಳ್ಳಾರಿ ರಸ್ತೆ, ಸಿಬಿಐ ಜಂಕ್ಷನ್‌ನಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಬಸವೇಶ್ವರ ಜಂಕ್ಷನ್‌ ಮೂಲಕ ವಿಂಡ್ಸರ್‌ ಮ್ಯಾನರ್‌ ಜಂಕ್ಷನ್‌ ತಲುಪುವ ವಾಹನಗಳಿಗೆ ಹೈಗ್ರೌಂಡ್ಸ್‌ ಜಂಕ್ಷನ್‌ನಲ್ಲಿ ತಡೆಯೊಡ್ಡಿದ ಕಾರಣ ಪ್ಯಾಲೇಸ್‌ ರಸ್ತೆ, ಕಲ್ಪನಾ ಎಂ.ಸಿ.ಸಿ. ಜಂಕ್ಷನ್‌, ವಸಂತನಗರ ಹಾಗೂ ಭಾಷ್ಯಂ ವೃತ್ತ, ಸಂಪಿಗೆ ರಸ್ತೆಯಲ್ಲೂ ವಾಹನ ದಟ್ಟಣೆ ಹೆಚ್ಚಾಗಿತ್ತು. ಶಿವಾನಂದ ಜಂಕ್ಷನ್‌ ನೆಹರೂ ಕಡೆಯಿಂದ ಬರುವ ವಾಹನಗಳನ್ನು ಎಸ್‌.ಸಿ. ರಸ್ತೆ ಜಂಕ್ಷನ್‌ನಲ್ಲಿ ತಡೆದ ಕಾರಣ ಸುಭೇದಾರ್‌ ಛತ್ರಂ ರಸ್ತೆ, ಆನಂದರಾವ್‌ ವೃತ್ತದ ಕಡೆಗೆ ತೆರಳುವ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. ರಾಜೀವ್‌ಗಾಂಧಿ ವೃತ್ತ ಮತ್ತು ಎಸ್‌.ಸಿ. ರಸ್ತೆಗೆ ತೆರಳುವ ವಾಹನಗಳಿಗೆ ಸ್ವಸ್ತಿಕ್‌ ಜಂಕ್ಷನ್‌ನಲ್ಲಿ ತಡೆಯೊಡ್ಡಿದ ಪರಿಣಾಮ ನಾಗಪ್ಪ ಸ್ಟ್ರೀಟ್‌, ನೆಹರು ವೃತ್ತ, ಶಿವಾನಂದ ವೃತ್ತದಲ್ಲೂ ಟ್ರಾಫಿಕ್‌ ಉಂಟಾಗಿತ್ತು. ಇನ್ನು ಸಂಪಿಗೆ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್‌, ಮಂತ್ರಿ ಸ್ಕ್ವೇರ್ ಹಾಗೂ ಶೇಷಾದ್ರಿಪುರಂ, ಸೆಂಟ್ರಲ್‌, ಮೆಜೆಸ್ಟಿಕ್‌, ರೈಸ್‌ಕೋರ್ಸ್‌ ರಸ್ತೆ ಉಪ್ಪಾರಪೇಟೆ ರಸ್ತೆಗಳಲ್ಲೂ ಸಾರ್ವಜನಿಕರು ನಿಂತಲ್ಲೇ ನಿಂತು ಬಿಸಿಲಿನ ಬೇಗೆಗೆ ಬಸವಳಿದರು. ಇತ್ತ ಕಾಟನ್‌ಪೇಟೆ ರಸ್ತೆ, ಮೈಸೂರು ರಸ್ತೆಯಿಂದ ಮಾರ್ಕೆಟ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಾಯನ್‌ ವೃತ್ತದ ಕಡೆಗೆ ಬರುವ ವಾಹನಗಳನ್ನು ನಿರ್ಬಂಸಲು ಬ್ಯಾರಿಕೇಡ್‌ ಹಾಕಿ ರಸ್ತೆ ಬಂದ್‌ ಮಾಡಿದ್ದರಿಂದ ಬಹುತೇಕ ಪ್ರಯಾಣಿಕರು ಕಾಂಗ್ರೆಸ್‌ ನಾಯಕರ ವಿರುದ್ಧ ಶಪಿಸುತ್ತಾ ಬಸ್‌ ಇಳಿದು ಕಿಲೋ ಮೀಟರ್‌ಗಟ್ಟಲೇ ನಡೆದು ಹೋದರು. ವಿದ್ಯಾರ್ಥಿಗಳ ಕಣ್ಣೀರುಪಾದಯಾತ್ರೆ ಬೆಳಗ್ಗೆಯೇ ಪ್ರಾರಂಭವಾಗಿದ್ದ ಪರಿಣಾಮ ಕೆಲವು ರಸ್ತೆಗಳಲ್ಲಿ ವಾಹಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗಿತ್ತು. ಹೀಗಾಗಿ, ಶಾಲಾ-ಕಾಲೇಜಿನಲ್ಲಿ ನಡೆಯುತ್ತಿದ್ದ ಪರೀಕ್ಷೆಗಳಿಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಗಳು ರಸ್ತೆ ನಿರ್ಬಂಧದಲ್ಲಿ ಸಿಲುಕಿ ಪಾದಯಾತ್ರೆಯಿಂದ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಮಾರ್ಗಮಧ್ಯದಲ್ಲೇ ಸಿಲುಕಿದ ಆಂಬ್ಯುಲೆನ್ಸ್‌ಮಾರುಕಟ್ಟೆ ಕಡೆಯ ರಸ್ತೆಯಿಂದ ಬಂದ ಆಂಬ್ಯುಲೆನ್ಸ್‌ವೊಂದು ಹತ್ತಿರದ ಆಸ್ಪತ್ರೆಗೆ ತೆರಳಲು ರಾಯನ್‌ ವೃತ್ತದ ಕಡೆಗೆ ತಿರುಗಿತು. ಈ ವೇಳೆ ರಾಯನ್‌ವೃತ್ತದಲ್ಲಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಜಮಾವಣೆಗೊಂಡು ತಮ್ಮ ವಾಹನಗಳನ್ನು ನಡು ರಸ್ತೆಯಲ್ಲೇ ನಿಲ್ಲಿಸಿದ ಪರಿಣಾಮ ಅಂಬ್ಯುಲೆನ್ಸ್‌ಗೆ ದಾರಿ ದೊರೆಯಲಿಲ್ಲ. ಸುಮಾರು ಅರ್ಧ ಗಂಟೆ ಕಾಲ ಪಾದಯಾತ್ರಿಗಳು ದಾರಿ ನೀಡದಿದ್ದಾಗ ಸ್ಥಳಕ್ಕೆ ಬಂದ ಟ್ರಾಫಿಕ್‌ ಪೊಲೀಸರು ಪ್ರತಿಯೊಬ್ಬರನ್ನು ರಸ್ತೆಬದಿಗೆ ಸರಿಸಿ ಆಂಬ್ಯುಲೆನ್ಸ್‌ ಹೋಗಲು ದಾರಿ ಮಾಡಿಕೊಟ್ಟರು.


from India & World News in Kannada | VK Polls https://ift.tt/CpXvlO5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...