
ಶಶಿಧರ ಹೆಗಡೆ ಬೆಂಗಳೂರು: ಕುಡಿಯುವ ನೀರಿನ ಹೋರಾಟದ ಮೂಲಕ ರಾಜ್ಯದಲ್ಲಿ ಸದ್ದು ಮಾಡಿದ್ದ ಕಾಂಗ್ರೆಸ್ಗೆ ಪಂಚ-ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಆಘಾತವಾಗಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿಯಲ್ಲಿ ಮುಂದಿನ ಚುನಾವಣೆಗೆ ಧೈರ್ಯದಿಂದ ಮುನ್ನುಗ್ಗಲು ಆತ್ಮವಿಶ್ವಾಸ ಮೂಡಿದಂತಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಈ ಬಾರಿ ಚೇತರಿಕೆ ನಿರೀಕ್ಷೆಯಲ್ಲಿತ್ತಾದರೂ ಸಫಲತೆ ಸಿಕ್ಕಿಲ್ಲ. ಆದರೆ, ಬಿಜೆಪಿ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ದಾಖಲಿಸಿದೆ. ಇದರಿಂದ ಸಹಜವಾಗಿ ಕರ್ನಾಟಕ ಬಿಜೆಪಿಯಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ. ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆಯಲ್ಲಿದ್ದ ಕಾಂಗ್ರೆಸ್ ರಣೋತ್ಸಾಹದಲ್ಲಿತ್ತು. ಆಗ ಬಿಜೆಪಿಯಲ್ಲಿ ಅಂತಹ ಬಿರುಸಿನ ಚಟುವಟಿಕೆ ಇರಲಿಲ್ಲ. ಫಲಿತಾಂಶ ಪ್ರಕಟವಾದಾಗ ಇದು ತಿರುವು ಮುರುವು ಆಗುವಂತಾಗಿದೆ. ಈ ನಡುವೆಯೂ 2023ರ ರಾಜ್ಯ ವಿಧಾನಸಭೆ ಚುನಾವಣೆ ಸ್ಪರ್ಧಾತ್ಮಕಗೊಳ್ಳಲಿದೆ ಎನ್ನಲು ಪಂಚರಾಜ್ಯ ಫಲಿತಾಂಶ ಮುನ್ಸೂಚನೆಯಾಗಿದೆ. () ರಾಜ್ಯದಲ್ಲಿ ಸದ್ಯಕ್ಕೆ ಬಜೆಟ್ ಅಧಿವೇಶನ ನಡೆಯುತ್ತಿದ್ದು ಸದನದ ಒಳ, ಹೊರಗೆ ಚುನಾವಣೆಯ ಗುಂಗು ಇದೆ. ಅಸೆಂಬ್ಲಿಎಲೆಕ್ಷನ್ ಸಿದ್ಧತೆಗೆ ಈಗಾಗಲೇ ಚಾಲನೆ ನೀಡುರುವ ಕಾಂಗ್ರೆಸ್ ಹತ್ತು ಹಲವು ಬಗೆಯ ತಂತ್ರಗಾರಿಕೆ ರೂಪಿಸುತ್ತಿದೆ. ಇದಕ್ಕೆ ಸಮರ್ಥ ತಿರುಗೇಟು ಕೊಡಲು ಬಿಜೆಪಿ ಮುಂದಾಗಿದ್ದರೂ ಆಡಳಿತ ಪಕ್ಷ ಸ್ವಲ್ಪ ಹಿನ್ನಡೆಯಲ್ಲಿದ್ದಂತೆ ಕಂಡಿತ್ತು. ಹಾಗಾಗಿ ಕಾಂಗ್ರೆಸ್ ಮೇಲುಗೈ ಸಾಧಿಸಿದಂತಿತ್ತು. ಆದರೆ, ಯುದ್ಧದ ತಯಾರಿಯಲ್ಲಿದ್ದ ಕಾಂಗ್ರೆಸ್ಗೆ ಈ ಫಲಿತಾಂಶದಿಂದ ಕಹಿಯಾಗಿದೆ. ಕಾಂಗ್ರೆಸ್ಗೆ ಕರ್ನಾಟಕ ಅತ್ಯಂತ ಪ್ರಮುಖ ರಾಜ್ಯ. ಈ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ನ ಪ್ರಮುಖರನ್ನು ಇತ್ತೀಚೆಗೆ ದಿಲ್ಲಿಗೆ ಕರೆಸಿಕೊಂಡಿದ್ದ ವರಿಷ್ಠರು ಒಗ್ಗಟ್ಟಿನ ಪಾಠ ಹೇಳಿ ಕಳುಹಿಸಿದ್ದರು. ಅದರ ಬೆನ್ನಿಗೇ ಮೇಕೆದಾಟು ಪಾದಯಾತ್ರೆ ಪಾರ್ಟ್-2 ಅನ್ನು ಯಶಸ್ವಿಗೊಳಿಸಲಾಗಿತ್ತು. ಇದೇ ರೀತಿ ಸಂಘಟನಾತ್ಮಕ ಚಟುವಟಿಕೆ ಮುಂದುವರಿಸಿದರೆ ಚುನಾವಣೆ ಎದುರಿಸುವುದು ಸುಲಭ ಎಂಬ ಲೆಕ್ಕಾಚಾರ ಕಾಂಗ್ರೆಸ್ನದಾಗಿತ್ತು. ಪಂಚ ರಾಜ್ಯಗಳ ಫಲಿತಾಂಶವು ಸದೃಢವಾಗಿರುವ ಕರ್ನಾಟಕ ಕಾಂಗ್ರೆಸ್ ಸಂಘಟನೆ ಮೇಲೂ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ. ಇದರಿಂದ ಬಿಜೆಪಿ ಹೆಚ್ಚಿನ ಲಾಭ ಅರಸುವುದು ಕೂಡ ನಿಶ್ಚಿತ. ಅಭಿವೃದ್ಧಿಯೇ ಮೂಲಮಂತ್ರ: ಉತ್ತರಾಖಂಡ್ನಲ್ಲಿ ರಾಜಕೀಯ ಸ್ಥಿತ್ಯಂತರ, ನಾಯಕತ್ವ ಬದಲಾವಣೆ ಬಳಿಕವೂ ಗೆಲುವು ದಾಖಲಿಸುವಲ್ಲಿ ಬಿಜೆಪಿ ಸಫಲವಾಗಿದೆ. ಕರ್ನಾಟಕದಲ್ಲೂ ಯಡಿಯೂರಪ್ಪ ಅವರನ್ನು ಬದಲಿಸಿ ಬಸವರಾಜ ಬೊಮ್ಮಾಯಿ ಅವರಿಗೆ ನಾಯಕತ್ವ ವಹಿಸಿ ಕೆಲ ಕಾಲವಾಗಿದೆ. ಉತ್ತರಾಖಂಡ್ನಲ್ಲಿ ಬಿಜೆಪಿ ಯಶ ಗಳಿಸಿರುವುದು ಅಭಿವೃದ್ಧಿಯ ಮಂತ್ರದಿಂದ. ಇದರ ಮುಂದೆ ಬೇರೆಲ್ಲ ಗೊಂದಲಗಳು ಪಕ್ಕಕ್ಕೆ ಸರಿದಿವೆ. ರಾಜ್ಯದಲ್ಲೂ ಬಾಕಿಯುಳಿದ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಕೈಗೊಂಡು ಸಂಘಟಿತರಾಗಿ ಹೋದರೆ ಬಿಜೆಪಿ ಭವಿಷ್ಯ ಭದ್ರವಾಗಲಿದೆ ಎಂಬ ಸಂದೇಶವನ್ನು ಉತ್ತರಾಖಂಡ್ ಫಲಿತಾಂಶ ನೀಡಿದೆ. ಅಲ್ಲಿಗೂ ಇಲ್ಲಿಗೂ ರಾಜಕಾರಣದ ಅಖಾಡ ಭಿನ್ನವಾಗಿರುವ ಕಾರಣ ನಾಜೂಕಿನ ನಿರ್ವಹಣೆಯೂ ಅಗತ್ಯ. ಉತ್ತರದ ರಾಜ್ಯಗಳಲ್ಲಿ ಬಹುತೇಕವಾಗಿ ಹಿಂದುತ್ವದ ರಾಜಕಾರಣದಲ್ಲೇ ಸವಾರಿ ಮಾಡಿದ ಇತಿಹಾಸ ಬಿಜೆಪಿಯದ್ದು. ಆದರೆ, ಜನಪ್ರಿಯ 'ಗುಜರಾತ್ ಮಾದರಿ' ನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ವಿಕಾಸದ ಮಾದರಿ ಚುನಾವಣೆಯಲ್ಲಿ ಚರ್ಚೆಯಾಗಿದೆ. ಯೋಗಿ ಆದಿತ್ಯನಾಥ್ ಖಡಕ್ ಆಡಳಿತ ನೀಡಿದ್ದು, ಕಾನೂನು ಸುವ್ಯವಸ್ಥೆ ಬಿಗಿಗೊಳಿಸಿದ್ದು, ಹೆದ್ದಾರಿ ನಿರ್ಮಾಣ ಸೇರಿ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದು ಉತ್ತರ ಪ್ರದೇಶದ ಗೆಲುವಿಗೆ ಯೋಗದಾನ ನೀಡಿದೆ ಎಂಬ ಅಭಿಮತವಿದೆ. ಈ ನಿಟ್ಟಿನಲ್ಲಿ ಚುರುಕಿನಿಂದ ಸಾಗಿದರೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣಬಹುದು. ಒಂದು ಕಾಲದಲ್ಲಿ ಅತ್ಯಂತ ಪ್ರಬಲ ಪ್ರಾದೇಶಿಕ ಪಕ್ಷವಾಗಿದ್ದ ಬಿಎಸ್ಪಿ ಈ ಬಾರಿ ಸಂಪೂರ್ಣ ಮುಗ್ಗರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಎಸ್ಪಿಯ ಒಲವು, ನಿಲುವುಗಳೇ ಗೊಂದಲಕಾರಿಯಾಗಿವೆ. ರಾಜ್ಯದಲ್ಲೂ ಪ್ರಾದೇಶಿಕ ಪಕ್ಷ ಎನಿಸಿಕೊಂಡಿರುವ ಜೆಡಿಎಸ್ಗೆ ಈ ಫಲಿತಾಂಶದಲ್ಲಿ ಖಂಡಿತ ಪಾಠವಿದೆ. ಆಪ್ನಂತಹ ಪಕ್ಷ ಸೀಮೋಲ್ಲಂಘನ ಮಾಡಿ ಪಂಜಾಬ್ನಲ್ಲಿ ಗೆಲುವು ಕಂಡಿದೆ. ಹಾಗಾಗಿ ಜೆಡಿಎಸ್ನಂತಹ ಪ್ರಾಂತೀಯ ಪಕ್ಷಗಳಲ್ಲಿ ಆತ್ಮಾವಲೋಕನಕ್ಕೆ ಇದು ಸಕಾಲ.
from India & World News in Kannada | VK Polls https://ift.tt/Wcl7UZL