ಬೆಂಗಳೂರು: ಟೆಸ್ಟ್ ತಂಡದಿಂದ ಹೊರದಬ್ಬಲ್ಪಟ್ಟಿರುವ ಕರ್ನಾಟಕದ ಭರವಸೆಯ ಬ್ಯಾಟ್ಸ್ಮನ್ ಸದ್ಯ ವಿಶ್ರಾಂತಿಯ ಗೋಜಿನಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಸೇರುವ ಮುನ್ನ ಕೆಎಲ್ ರಾಹುಲ್ ಅಲ್ಪ ವಿರಾಮವನ್ನು ಪಡೆದಿದ್ದಾರೆ. ಅಲ್ಲದೆ ಟ್ವಿಟರ್ನಲ್ಲಿ ಅಕ್ಷರಶ ಚಿಲ್ಲಿಂಗ್ ಎಂಬ ಚಿತ್ರವನ್ನು ಹಂಚಿದ್ದಾರೆ. ಪ್ರಸ್ತುತ ಕೆಎಲ್ ರಾಹುಲ್ ಟ್ವೀಟ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ನೆಟ್ಟಿಗರು ಭಾರಿ ಟ್ರೋಲ್ ಮಾಡುವ ಮೂಲಕ ರಾಹುಲ್ ಕಾಲೆಳೆದಿದ್ದಾರೆ. ಅಯ್ಯೋ ನಿನ್ನ ಹಣೆಬರಹವೇ ಎಂದು ಕನ್ನಡಿಗರು ಛೇಡಿಸಿದರೆ ಸ್ವಲ್ಪ ಕ್ರಿಕೆಟ್ನತ್ತ ಗಮನ ಹರಿಸುವಂತೆ ಅಭಿಮಾನಿಗಳು ಪಾಠ ಹೇಳಿಕೊಟ್ಟಿದ್ದಾರೆ. ಮತ್ತೊಬ್ಬ ಕನ್ನಡಿಗ ಉತ್ತಮ ಅವಕಾಸ ಸಿಕ್ಕಿದರೂ ಸದುಪಯೋಗಪಡಿಸುತ್ತಿಲ್ಲವೆಂದು ಕೊರಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟ್ವೆಂಟಿ-20 ಸರಣಿಯಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಅವಕಾಶದಿಂದ ಕೆಎಲ್ ರಾಹುಲ್ ವಂಚಿತವಾಗಿದ್ದರು. ಈ ಮೊದಲು ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಹಿನ್ನಲೆಯಲ್ಲಿ ಟೆಸ್ಟ್ ತಂಡದಿಂದಲೂ ಕೈಬಿಡಲಾಗಿದೆ. ಇದರಿಂದಾಗಿ ಪ್ರತಿಭಾವಂತ ರಾಹುಲ್ ಅವಕಾಶ ವಂಚಿತವಾಗಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ರಾಹುಲ್ ತಾತ್ಕಾಲಿಕ ನಿಷೇಧ ಹಾಗೂ ದಂಡನೆಗೊಳಗಾಗಿದ್ದರು. ಬಳಿಕ ಏಕದಿನ ವಿಶ್ವಕಪ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಾಣಸಿಕೊಂಡಿದ್ದ ರಾಹುಲ್, ಬಳಿಕ ಶಿಖರ್ ಧವನ್ ಗಾಯಾಳುವಾದ ಹಿನ್ನಲೆಯಲ್ಲಿ ರೋಹಿತ್ ಶರ್ಮಾ ಜತೆಗೆ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಗಾಯಮುಕ್ತರಾಗಿರುವ ಶಿಖರ್ ಧವನ್ ತಂಡವನ್ನು ಸೇರಿರುವ ಹಿನ್ನಲೆಯಲ್ಲಿ ರಾಹುಲ್ಗೆ ಅವಕಾಶ ನಿರಾಕರಿಸಲ್ಪಟ್ಟಿದೆ. ಒಟ್ಟಿನಲ್ಲಿ ರಾಹುಲ್ ಮುಂದಿನ ಭವಿಷ್ಯ ಏನಾಗಿರಲಿದೆ ಎಂಬುದು ಕುತೂಹಲವೆನಿಸಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2n1g5dW