ಬಳ್ಳಾರಿ: ಮನೆಗೆ ಪಿಲ್ಲರ್ ಹಾಕಲೆಂದು ತೋಡಲಾಗಿದ್ದ ಬುನಾದಿಯ ಗುಂಡಿಯಲ್ಲಿ ಬಿದ್ದು 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರುಗುಪ್ಪದ ಯಲ್ಲಾಲಿಂಗ ಕಾಲೋನಿಯಲ್ಲಿ ನಡೆದಿದೆ. ನಗರದ ನಿವಾಸಿ ಗಂಗಾಧರ ಅವರ ಪುತ್ರಿ ಬಸಮ್ಮ ಮೃತ ಬಾಲಕಿ. ತೆಕ್ಕಲಕೋಟೆ ಪೊಲೀಸ್ ಠಾಣೆಯ ಎಎಸ್ಐಯೊಬ್ಬರು ಸಿರುಗುಪ್ಪದ ಯಲ್ಲಾಲಿಂಗ ನಗರದಲ್ಲಿ ಮನೆ ಕಟ್ಟಲು ಬುನಾದಿ ತೋಡಿದ್ದರು. ಕುರುಕಲು ತಿಂಡಿ ಖರೀದಿಸಲು ಅಂಗಡಿಗೆ ತೆರಳಿದ್ದ ಬಾಲಕಿ, ಮನೆಗೆ ವಾಪಸ್ ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆ. ಕಳೆದ ಎರಡುಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪಿಲ್ಲರ್ ಹಾಕಲೆಂದು ತೋಡಿದ್ದ ಗುಂಡಿಯಲ್ಲಿ ನೀರು ತುಂಬಿತ್ತು. ಬಾಲಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಸಿಪಿಐ ಮೌನೇಶ್ವರ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
from India & World News in Kannada | VK Polls https://ift.tt/2lcyX9i