ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಸಹ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ನಗರದಲ್ಲಿ ಕಳೆದ 2, 3 ದಿನಗಳಿಂದ ಮಳೆ ಸುರಿಯುತ್ತಿದೆ. ಆದರೆ ಎಲ್ಲಿಯೂ ಅನಾಹುತವಾದ ವರದಿಯಾಗಿಲ್ಲ ಇನ್ನೂ ಒಂದೆರಡು ದಿನ ಮಳೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಗಲಿನಲ್ಲಿ ಮಳೆ ಕಡಿಮೆ ಇದ್ದು, ಸಂಜೆ ಮತ್ತು ರಾತ್ರಿ ವೇಳೆ ಮಳೆ ಸುರಿಯುತ್ತಿದೆ. ವಾಯುಭಾರ ಕುಸಿತದ ಪರಿಣಾಮ ಕೆಲವೊಮ್ಮೆ ಜೋರು ಮಳೆ ಸುರಿಯಬಹುದು. ಕೆಲವೊಮ್ಮೆ ಸೋನೆ ಮಾದರಿಯಲ್ಲಿ ತುಂತುರು ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬೀ ಸಮುದ್ರದಲ್ಲಿ ಹಿಕಾ ಚಂಡಮಾರುತ ಕಾಣಿಸಿಕೊಂಡ ಪರಿಣಾಮದಿಂದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ಇದರ ಜತೆಗೆ ಬಂಗಾಳಕೊಲ್ಲಿಯಲ್ಲಿವಾಯುಭಾರ ಕುಸಿತವಾಗಿರುವುದು ಮಳೆ ಜೋರಾಗಲು ಕಾರಣವಾಗಿದೆ. ಈ ನಡುವೆ ಕೇರಳದಿಂದ ಮಳೆ ಸುರಿಸುವ ಮೋಡಗಳು ಬರುತ್ತಿರುವುದರಿಂದ ಮಳೆ ಜೋರಾಗಿದೆ. ಒಳನಾಡಿನ ಕೇಂದ್ರಭಾಗದಲ್ಲಿರುವ ಮಹಾನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಈ ಹವಾಮಾನ ಬದಲಾವಣೆ ಪರಿಣಾಮ ಹೆಚ್ಚಾಗಿ ತಟ್ಟಿದೆ. ಮುಂಗಾರು ಆರಂಭದಿಂದಲೂ ಬೇರೆ ಜಿಲ್ಲೆಗಳಲ್ಲಿಧಾರಾಕಾರವಾಗಿ ಮಳೆ ಬಂದರೂ ನಗರದಲ್ಲಿಹೆಚ್ಚು ಮಳೆಯಾಗಿರಲಿಲ್ಲ. ಹವಾಮಾನ ಇಲಾಖೆಯು ನಗರಕ್ಕೆ ಸೆ.25 ರವರೆಗೆ ಹಳದಿ ಎಚ್ಚರಿಕೆ ನೀಡಿತ್ತು. ರೆಡ್ ಅಲರ್ಟ್, ಕಿತ್ತಳೆ ಅಲರ್ಟ್ ನಂತರದ ಸ್ಥಾನದಲ್ಲಿ ಹಳದಿ ಅಲರ್ಟ್ ಬರುತ್ತದೆ. ಒಂದು ಸ್ಥಳದಲ್ಲಿ65 ರಿಂದ 115 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹಳದಿ ಬಣ್ಣದ ಸಂಕೇತದ ಮೂಲಕ ತಿಳಿಸಲಾಗಿದೆ. ಅಂದರೆ ಭಾರಿ ಪ್ರಮಾಣದ ಮಳೆ ಇಲ್ಲದಿದ್ದರೂ ಸಾಧಾರಣದಿಂದ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇರುತ್ತದೆ ಎಂಬುದು ಇದರರ್ಥ. ''ಚಂಡಮಾರುತದ ಪ್ರಭಾವ ಮಂಗಳವಾರದಿಂದ ಕಡಿಮೆಯಾಗಿದೆ. ಆದರೆ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಮುಂದುವರಿಯಲಿದೆ. ಮುಂಗಾರು ಸದ್ಯಕ್ಕೆ ದುರ್ಬಲವಾಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಸೆ.27 ಅಥವಾ 28 ರವರೆಗೂ ಮಳೆ ಬರುವ ಸಾಧ್ಯತೆ ಇದೆ. ಪ್ರತಿ ದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಹಿಂದೆ ಅಲ್ಲಲ್ಲಿ ಮಳೆ ಬರುತ್ತಿತ್ತು. ಈಗ ವ್ಯಾಪಕವಾಗಿ ಮಳೆ ಸುರಿಯುತ್ತಿದೆ,'' ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಇನ್ನೆರಡು ದಿನ ಮಳೆ ಕಳೆದ ಎರಡು ದಿನಗಳಿಂದ ಹಗುರದಿಂದ ಸಾಧಾರಣ ಮಳೆಯಾಗುತ್ತಿದ್ದು, ಬುಧವಾರ ಸಂಜೆ ವೇಳೆ ಮಂಗಳೂರಿನಲ್ಲಿಹಗುರ ಮಳೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಬುಧವಾರ ಜಿಲ್ಲೆಯ ವಿವಿಧ ಕಡೆಗಳಲ್ಲಿಮಳೆಯಾಗಿದೆ. ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ65 ಮಿಮೀ. ಹಾಗೂ ಶಿರಾಡಿಯಲ್ಲಿ47.5 ಮಿಮೀ. ಮಳೆಯಾಗಿದೆ. ಜಿಲ್ಲೆಯಲ್ಲಿಯೆಲ್ಲೋ ಅಲರ್ಟ್ ಮುಂದುವರಿದಿದೆ. ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆ ಮತ್ತೆ ಉಕ್ಕಿ ಹರಿದ ನದಿಗಳು , ಸಂಕಷ್ಟಕ್ಕೊಳಗಾದ ಜನರು ಬೆಳ್ತಂಗಡಿ: ಪಶ್ಚಿಮ ಘಟ್ಟದ ಬೆಟ್ಟ ಶ್ರೇಣಿಯಲ್ಲಿಆ.9ರಂದು ಸಂಭವಿಸಿದ ಭೀಕರ ಜಲಸ್ಫೋಟ, ಜತೆಯಲ್ಲೇ ಉಂಟಾದ ಪ್ರವಾಹದಿಂದ ಬೆಳ್ತಂಗಡಿ ತಾಲೂಕಿನ ನದಿ ಪಕ್ಕದ ಹಳ್ಳಿಗಳು ಅಪಾರ ಸಂಕಷ್ಟಕ್ಕೆ ತುತ್ತಾದ ಕಹಿ ನೆನಪು ಮಾಸುವ ಮುನ್ನವೇ ಬುಧವಾರ ಮತ್ತೆ ಚಾರ್ಮಾಡಿ ಬೆಟ್ಟ ಪ್ರದೇಶದಲ್ಲಿಭಾರೀ ಮಳೆಯಾಗಿದ್ದು, ನದಿಯಲ್ಲಿ ಒಮ್ಮೆಲೇ ನೀರು ಉಕ್ಕಿ ಹರಿದ ಪರಿಣಾಮ ಸ್ಥಳೀಯ ಜನರು ಮತ್ತೆ ಸಂಕಷ್ಟಕ್ಕೊಳಗಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೆಲವು ಭಾಗದಲ್ಲಿತುಂತುರು ಮಳೆ ಮತ್ತು ಬಿಸಿಲಿನ ವಾತಾವರಣ ಇದ್ದ ಹೊರತಾಗಿಯೂ, ಬುಧವಾರ ಮಧ್ಯಾಹ್ನದಿಂದ ಚಾರ್ಮಾಡಿ ಮತ್ತು ಪಕ್ಕದ ಕಾಡು ಪ್ರದೇಶಗಳಲ್ಲಿಭಾರೀ ಪ್ರಮಾಣದ ಮಳೆಯಾದ ಕಾರಣ ಹಳ್ಳ, ಕೊಳ್ಳ, ತೊರೆ, ಜಲಪಾತಗಳು ಉಕ್ಕಿ ಹರಿದಿವೆ. ಇದರ ಪರಿಣಾಮ ಮೃತ್ಯುಂಜಯ ನದಿ, ಏಳೂವರೆ ಹಳ್ಳ, ಕೂಡುಬೆಟ್ಟು ಹಳ್ಳ, ಬಂಡಾಜೆ ಫಾಲ್ಸ್ ಮತ್ತಿತರ ಪ್ರದೇಶಗಳಲ್ಲಿಬೆಟ್ಟಗಳಿಂದ ಯಥೇಚ್ಛ ನೀರು ಹರಿದಿದೆ. ಚಾರ್ಮಾಡಿ ಘಾಟಿ ತಪ್ಪಲಿನ ಕೊಳಂಬೆ, ಅಂತರ ಮುಂತಾದ ಪ್ರದೇಶದಲ್ಲಿಕಳೆದ ತಿಂಗಳು ಅಪಾರ ಹಾನಿ ಉಂಟಾಗಿದ್ದು, ಬುಧವಾರವೂ ನೆರೆ ನೀರು ನದಿಯಲ್ಲಿಉಕ್ಕಿ ಪಕ್ಕದ ಗದ್ದೆ, ತೋಟಗಳಿಗೆ ನುಗ್ಗಿದೆ. ಇದರಿಂದ ಜನ ಕಂಗಾಲಾಗಿದ್ದಾರೆ. ದಿಡುಪೆ, ಮಕ್ಕಿ, ಇಲ್ಯಾರಕಂಡ ಮತ್ತಿತರ ಭಾಗದಲ್ಲೂಮಳೆಯಾಗಿದೆ. ಎರಡು ದಿನಗಳ ಹಿಂದಷ್ಟೇ ಕುಮಾರಪರ್ವತದ ದರ್ಪಣ ತೀರ್ಥ ಹೊಳೆ ಉಕ್ಕಿ ಹರಿದ ಕಾರಣ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿಕೃತಕ ನೆರೆ ಉಂಟಾಗಿತ್ತು. ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿಯ ಉಪನದಿಗಳಲ್ಲಿನೀರಿನ ಮಟ್ಟ ಏರಿಕೆಯಾದ ಕಾರಣ ಕಳೆದ ತಿಂಗಳು ಸಂಕಷ್ಟಕ್ಕೆ ತುತ್ತಾದ ಜನ ಮತ್ತೆ ಚಿಂತೆಗೀಡಾಗಿದ್ದಾರೆ. ಪರ್ಲಣಿ, ಕುಕ್ಕಾವು ಮುಂತಾದ ಪ್ರದೇಶಗಳಲ್ಲೂಮೃತ್ಯುಂಜಯ ನದಿಯ ನೀರಿನ ಮಟ್ಟ ಏರುತ್ತಿದೆ. ಭಯ ಪಡಬೇಕಾಗಿಲ್ಲ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳ್ತಂಗಡಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಘಾಟಿ ಪ್ರದೇಶದಲ್ಲಿಮಳೆಯಾದ ಕಾರಣ ನದಿಯಲ್ಲಿನೀರು ಹೆಚ್ಚಳವಾಗಿದೆ. ಆದರೆ ಅಪಾಯಕಾರಿ ಸ್ಥಿತಿ ಏನೂ ಇಲ್ಲ. ನಾವು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದೇವೆ. ತೋಟಗಳಿಗೆ ಕೆಲವು ಕಡೆ ನೀರು ನುಗ್ಗಿದೆ ಎಂದು ತಿಳಿಸಿದ್ದಾರೆ. ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿ, ಪರಿಸ್ಥಿತಿಯ ಮೇಲೆ ಪೂರ್ಣ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಜನತೆ ಭಯ ಪಡಬೇಕಾಗಿಲ್ಲ. ಮಳೆಯ ಪ್ರಮಾಣ ಹೆಚ್ಚಾದರೆ ಅಗತ್ಯವೆಂದು ಕಂಡು ಬಂದರೆ ನದಿ ತಟದ ಜನರನ್ನು ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ತಿಂಗಳು ಉಕ್ಕಿದ ನೆರೆಯಿಂದಾಗಿ ನದಿಯಲ್ಲಿಮರಳಿನ ಪ್ರಮಾಣ ಜಾಸ್ತಿಯಾಗಿದ್ದು, ಈಗಿನ ಮಳೆಗೆ ತಕ್ಷಣ ನೀರಿನ ಮಟ್ಟ ಏರಲು ಇದೇ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ನೇತ್ರಾವತಿಯಲ್ಲಿ ನೀರು ಏರಿಲ್ಲ... ನೇತ್ರಾವತಿ ನದಿಯ ಮೂಲದಿಂದ ನೆರೆ ನೀರು ಹರಿದು ಬಂದಿಲ್ಲ. ಆದರೆ ಉಪ ನದಿಗಳಾದ ಮೃತ್ಯುಂಜಯ, ಏಳೂವರೆ ಹಳ್ಳ, ಕೂಡಬೆಟ್ಟು ಹಳ್ಳ ಮುಂತಾದವುಗಳಲ್ಲಿವಿಪರೀತ ನೀರು ಬಂದಿದೆ. ಮಕ್ಕಿ, ಸಿಂಗನಾರು, ಪರ್ಲ ಭಾಗದಲ್ಲಿಮಳೆಯಾಗಿದ್ದೇ ಇದಕ್ಕೆ ಕಾರಣ. ಚಾರ್ಮಾಡಿ ತಪ್ಪಲಿನ ಔಟಾಜೆ, ಅಂತರ, ಕೊಳಂಬೆ, ನಳೀಲು, ಪರ್ಲಾಣಿ, ಅರಣೆಪಾದೆ, ಹೊಸಮಠ, ಮುಗುಳಿದಡ್ಡ, ಅನ್ನಾರ್, ದಿಡುಪೆ, ಕುಕ್ಕಾವು ಮತ್ತಿತರ ಪ್ರದೇಶಗಳಲ್ಲಿತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಮುಸ್ಸಂಜೆ ಬಳಿಕ ನೀರಿನ ಪ್ರಮಾಣ ತಗ್ಗಿದೆ. ದಾವಣಗೆರೆ, ಚಿತ್ರದುರ್ಗದಲ್ಲಿ ಮಳೆಯ ಸೂಚನೆ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ 'ಹಿಕಾ' ಚಂಡಮಾರುತದ ಎಫೆಕ್ಟಿನಿಂದಾಗಿ ಅವಳಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಬುಧವಾರದಿಂದ- ಶುಕ್ರವಾರದವರೆಗೆ ಮೂರು ದಿನ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
from India & World News in Kannada | VK Polls https://ift.tt/2lUJl63