ಅಗರ್ತಲಾ: ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ನಿರ್ಭಯಾ ಪ್ರಕರಣ ಮಾದರಿಯಲ್ಲಿಯೇ ಮತ್ತೊಂದು ಭೀಕರ ಮತ್ತು ಅಮಾನವೀಯ ಪ್ರಕರಣ ವರದಿಯಾಗಿದೆ. ಆರು ವರ್ಷದ ಮಗಳ ಜತೆ ಅಗರ್ತಲಾ ವೈದ್ಯಕೀಯ ಕಾಲೇಜಿನಿಂದ ಹಿಂದಿರುಗುತ್ತಿದ್ದ ಮಹಿಳೆಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ 8 ಜನ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ರಸ್ತೆ ಬದಿ ಎಸೆದು ಪರಾರಿಯಾಗಿರುವ ಘೋರ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಈ ಘೋರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಂತ್ರಸ್ತ ಮಹಿಳೆಯ ಪತಿ ಪೂರ್ವ ಅಗರ್ತಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 8 ಜನರ ಪೈಕಿ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳವಾರ ಸಂಜೆ 7.30ರ ಸುಮಾರಿಗೆ ಸಂತ್ರಸ್ತ ಮಹಿಳೆ ಪರಿಚಿತರೊಬ್ಬರ ಆಟೋ ರಿಕ್ಷಾ ಹತ್ತಿ ಅಗರ್ತಲಾ ವೈದ್ಯಕೀಯ ಕಾಲೇಜಿನಿಂದ ಪುತ್ರಿ ಜತೆ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಚಾಲಕ ಮಾರ್ಗ ಬದಲಾಯಿಸಿದ್ದಾನೆ. ಇದಕ್ಕೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದಾಗ, ಬೇರೊಬ್ಬ ಪ್ರಯಾಣಿಕರನ್ನು ಸಹ ಪಿಕ್ ಮಾಡುವುದು ಇದೆ ಎಂದಿದ್ದಾನೆ. ಬಳಿಕ ಮಾರ್ಗ ಮಧ್ಯ ನಾಲ್ವರು ದುಷ್ಕರ್ಮಿಗಳು ಆಟೋ ಅಡ್ಡಗಟ್ಟಿ ಮಹಿಳೆಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾರೆ. ಸುಮಾರು 15 ಕಿ.ಮೀ ಸಾಗಿದ ಬಳಿಕ ಮತ್ತೆ ನಾಲ್ವರು ಜತೆ ಗೂಡಿದ್ದಾರೆ. ಇವರೆಲ್ಲರೂ ಮಹಿಳೆಯನ್ನು ಕಾರಿನಲ್ಲಿಯೇ ಅತ್ಯಾಚಾರ ಎಸಗಿದ್ದಾರೆ ಎಂದು ಪೂರ್ವ ಅಗರ್ತಲಾ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಮುಮ್ತಾಜ್ ಹಸೀನಾ ತಿಳಿಸಿದ್ದಾರೆ. ಈ ಘೋರ ಘಟನೆಯನ್ನು ಖಂಡಿಸಿರುವ ಬಿಜೆಪಿ ಸಂಸದೆ ಪ್ರತಿಯಾ ಭೌಮಿಕ ಅವರು , ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
from India & World News in Kannada | VK Polls https://ift.tt/2nFs0hT