
ಕಣಿತಹಳ್ಳಿ ಎನ್.ಚಂದ್ರೇಗೌಡ ಚಿಕ್ಕಬಳ್ಳಾಪುರ: ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ಗೆ 10 ರೂ.ಗಿಂತಲೂ ಹೆಚ್ಚು ಏರಿಕೆಯಾಗುತ್ತದೆ ಎಂಬ ವರದಿಗಳ ಬಿಸಿ ವಾಹನ ಸವಾರರಿಗೂ ತಟ್ಟಿದೆ. ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯ ಪೆಟ್ರೋಲ್ ದಾಸ್ತಾನಿಲ್ಲ ಎಂಬ ಬೋರ್ಡ್ಗಳು ಕಾಣಿಸಿಕೊಂಡಿದೆ. ದರ ಹೆಚ್ಚಾಗುವ ನಿರೀಕ್ಷೆಯಲ್ಲಿ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂಬ ಶಂಕೆ ಇದೆ. ಪೆಟ್ರೋಲ್ ಬೇಕೇ ಬೇಕು ಎಂದಾದರೆ ಕನಿಷ್ಠ ಆರು ರೂ. ದುಬಾಯಿಯಾಗಿರುವ ಪ್ರೀಮಿಯಂ ಪೆಟ್ರೋಲನ್ನೇ ಬಳಸಬೇಕಾದ ಅನಿವಾರ್ಯತೆ ಇದೆ. ಇಷ್ಟರ ನಡುವೆಯೇ ಕೆಲವು ವಾಹನ ಸವಾರರು ಟ್ಯಾಂಕ್ ಫುಲ್ ಮಾಡಿಸುತ್ತಿದ್ದು ಕೆಲವರು ಬಾಟಲ್, ಕ್ಯಾನ್ಗಳಲ್ಲೂ ಪೆಟ್ರೋಲ್ ಮತ್ತು ಡೀಸೆಲ್ನ್ನು ಖರೀದಿಸಿ ಹೋಗುತ್ತಿರುವುದು ಕಂಡುಬಂದಿದೆ. ತೈಲ ಕಂಪನಿಗಳು ಅಡ್ವಾನ್ಸ್ ಬುಕ್ ಮಾಡಿದರೂ ದಿನನಿತ್ಯ ಸರಬರಾಜು ಮಾಡುತ್ತಿದ್ದ ಸಾಮಾನ್ಯ ಪೆಟ್ರೋಲ್ನ್ನು ಸರಬರಾಜು ಮಾಡುತ್ತಿಲ್ಲ. ಹೀಗಾಗಿ ಬಂಕ್ನಲ್ಲಿದ್ದ ಸ್ಟಾಕ್ ಖಾಲಿಯಾಗಿದ್ದು ಅನಿವಾರ್ಯವಾಗಿ ಲಭ್ಯವಿರುವ ಪ್ರೀಮಿಯಂ ಪೆಟ್ರೋಲ್ ಮಾಡುತ್ತಿದ್ದೇವೆ ಎನ್ನುತ್ತಾರೆ ಹೆಸರೇಳಲು ಇಚ್ಛಿಸದ ಬಂಕ್ ಮಾಲೀಕರು. ಇನ್ನೊಂದೆಡೆ ಸಾಮಾನ್ಯ ಪೆಟ್ರೋಲ್ ಸರಬರಾಜು ಮಾಡಿದರೆ ಬಂಕ್ ಮಾಲೀಕರು ಹೆಚ್ಚಾಗಿ ಸ್ಟಾಕ್ ಮಾಡುತ್ತಾರೆ ಎನ್ನುವ ಕಾರಣಕ್ಕೆ ಅಡ್ವಾನ್ಸ್ ಬುಕ್ ಮಾಡಿದರೂ ಒದಗಿಸುತ್ತಿಲ್ಲಎಂಬ ಮಾತೂ ಕೇಳಿಬರುತ್ತಿದೆ. ಈ ಹೊಯ್ದಾಟದಲ್ಲಿ ಜನಸಾಮಾನ್ಯರು ಪರದಾಡುವಂತಾಗಿದೆ. ‘ಪೆಟ್ರೋಲ್- ಡೀಸೆಲ್ ವಿತರಣೆಯಲ್ಲಿ ಸಮಸ್ಯೆಯಾಗಿಲ್ಲ. ಒಂದು ವೇಳೆ ಆ ರೀತಿ ಸಮಸ್ಯೆಯಾಗಿ ದೂರು ಬಂದರೆ ಅಂತಹ ಏಜೆನ್ಸಿಯ ಅನುಮತಿಯನ್ನು ರದ್ದುಪಡಿಸಲಾಗುವುದು. ಪೆಟ್ರೋಲ್ ಇಲ್ಲವೆಂದು ಬಂಕ್ನವರು ಹೇಳಿದರೆ ಸಂಘಕ್ಕೆ ಮಾಹಿತಿ ನೀಡಿ’ ಎಂದು ರಾಷ್ಟ್ರೀಯ ಕಾರ್ಯದರ್ಶಿ, ಅಖಿಲ ಭಾರತ ಪೆಟ್ರೋಲ್ ಬಂಕ್ ಅಸೋಷಿಯೇಶನ್ನ ರಾಷ್ಟ್ರೀಯ ಕಾರ್ಯದರ್ಶಿ ತಾರಾನಾಥ್ ತಿಳಿಸಿದ್ದಾರೆ. ಕಳೆದ ಎರಡು ದಿನದಿಂದ ನಮಗೆ ಸಾಮಾನ್ಯ ಪೆಟ್ರೋಲ್ ಪೂರೈಕೆಯಾಗುತ್ತಿಲ್ಲ. ಇದುವರೆಗೂ ಸ್ಟಾಕ್ ಇದ್ದ ಪೆಟ್ರೋಲನ್ನೇ ಹಾಕಿದ್ದೇವೆ. ತೈಲ ಕಂಪನಿಗಳಿಂದ ಪ್ರೀಮಿಯಂ ಪೆಟ್ರೋಲ್ ಮಾತ್ರ ಸರಬರಾಜಾಗುತ್ತಿದೆ. ಬೆಲೆ ಏರಿಕೆಯಾಗುವ ಸಾಧ್ಯತೆ ಇರುವ ಕಾರಣ ಹೀಗೆ ಆಗಿರಬಹುದು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪೆಟ್ರೋಲ್ ಬಂಕ್ ಸಿಬ್ಬಂದಿ.
from India & World News in Kannada | VK Polls https://ift.tt/LvUdbwn