ಹೊಸದಿಲ್ಲಿ: ವಲಯದಲ್ಲಿ ಚೀನೀ ಪ್ರಭಾವ ವಿಸ್ತರಣೆ ಹಿನ್ನೆಲೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಬಜೆಟ್ ಮತ್ತು ಇತರ ಮಿತಿಗಳ ನಡುವೆಯೂ ಸ್ಪಂದಿಸಲೇಬೇಕಾದ ಅನಿವಾರ್ಯತೆ ಹೊಂದಿವೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ಬೀರ್ ಸಿಂಗ್ ಹೇಳಿದ್ದಾರೆ. 'ನಾವು ಚೀನಾದ ಮೇಲೆ ಜಾಗೃತ ಕಣ್ಗಾವಲು ಇಡಬೇಕಿದೆ' ಎಂದು ನೌಕಾಪಡೆ ಮುಖ್ಯಸ್ಥರು ನುಡಿದರು. 'ಹೊಸಯುಗದಲ್ಲಿ ಚೀನಾದ ರಾಷ್ಟ್ರೀಯ ಭದ್ರತೆ' ಹೆಸರಿನ ಶ್ವೇತಪತ್ರವನ್ನು ಚೀನಾ ಪ್ರಕಟಿಸಿದ ಮರುದಿನ ನೌಕಾಪಡೆ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಅಮೆರಿಕದ ವ್ಯೂಹಾತ್ಮಕ ಚಲನವಲನಗಳ ವಿರುದ್ಧ ಚೀನಾ ವಾಗ್ದಾಳಿ ನಡೆಸಿದೆ. ಚೀನಾದ ಶ್ವೇತಪತ್ರದಲ್ಲಿ ಭಾರತವನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಿದ್ದು ಬಿಟ್ಟರೆ ಹೆಚ್ಚೇನೂ ಹೇಳಿಲ್ಲ. ಭಾಋತ-ಚೀನಾ ಗಡಿಯಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದಷ್ಟೇ ಚೀನಾ ತನ್ನ ಶ್ವೇತಪತ್ರದಲ್ಲಿ ತಿಳಿಸಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ನೌಕಾಪಡೆ ಚಲನವಲನಗಳನ್ನು ಭಾರತ ಕಡೆಗಣಿಸುವಂತಿಲ್ಲ. ಆಫ್ರಿಕಾದ ಜಿಬೌಟಿ ದ್ವೀಪದಲ್ಲಿ ಚೀನಾ ತನ್ನ ನೌಕಾನೆಲೆ ಸ್ಥಾಪಿಸಿಕೊಂಡಿದೆ. ಅಲ್ಲದೆ ಕರಾಚಿ ನೌಕಾನೆಲೆಯಲ್ಲೂ ತನ್ನ ಚಲನವಲನ ಹೆಚ್ಚಿಸಿದೆ. ಸದ್ಯ ಯಾವುದೇ ವೇಳೆ ಚೀನಾ ಹಿಂದೂ ಮಹಾಸಾಗರದಲ್ಲಿ 6-8 ಯುದ್ಧನೌಕೆಗಳನ್ನು ನಿಯೋಜಿಸುವ ಸಾಮರ್ಥ್ಯ ಹೊಂದಿದೆ. 'ಇದು ಚೀನಾದ ಶ್ವೇತಪತ್ರವಷ್ಟೇ ಅಲ್ಲ. ಹಿಂದೆಯೂ ಅದು ಇಂತಹ ಹೇಳಿಕೆಗಳನ್ನು ನೀಡಿತ್ತು. ಪಿಎಲ್ಎ ನೌಕಾಪಡೆ ಜಾಗತಿಕ ಶಕ್ತಿಯಾಗುವ ಮಹತ್ವಾಕಾಂಕ್ಷೆ ಹೊಂದಿದೆ. ನಾವು ಎಚ್ಚರಿಕೆಯಿಂದ ಈ ಬೆಳವಣಿಗೆಗಳನ್ನು ಗಮನಿಸಬೇಕಿದ್ದು, ನಮ್ಮ ಬಜೆಟ್ ಮತ್ತು ಇತಿಮಿತಿಗಳ ನಡುವೆಯೇ ಸ್ಪಂದಿಸಬೇಕಿದೆ' ಎಂದು ಅಡ್ಮಿರಲ್ ಸಿಂಗ್ ತಿಳಿಸಿದರು. ನೌಕಾ ನಿರ್ಮಾಣ ಕುರಿತ ವಿಚಾರಸಂಕಿರಣದ ನೇಪಥ್ಯದಲ್ಲಿ ಅವರು ಈ ಹೇಳಿಕೆ ನೀಡಿದರು. ಬಜೆಟ್ ಮಿತಿಗಳನ್ನು ಪ್ರಸ್ತಾಪಿಸಿದ ಅವರು, 'ನೌಕಾಪಡೆ ಬಲವರ್ಧನೆಗೆ ದೀರ್ಘಾವಧಿ ವಿತ್ತೀಯ ಬೆಂಬಲ ಅಗತ್ಯವಿದೆ. ಅದನ್ನು ಮಾತ್ರ ನಾವು ಯೋಜನೆ ಮಾಡಬಹುದು' ಎಂದು ಅಡ್ಮಿರಲ್ ಸಿಂಗ್ ತಿಳಿಸಿದರು. ಪ್ರಸ್ತುತ ಸುಮಾರು 140 ಯುದ್ಧ ನೌಕೆಗಳು ಮತ್ತು 220 ವಿಮಾನಗಳನ್ನು ಹೊಂದಿದೆ. ಅವುಗಳ ಪೈಕಿ ಹೆಚ್ಚಿನವೂ ನಿವೃತ್ತಿಯ ಅಂಚಿಗೆ ಬರುತ್ತಿವೆ. ಸರಿಯಾದ ಅನುದಾನ ದೊರೆತರೆ 2030ರ ವೇಳೆಗೆ ನೌಕಾಪಡೆಯ ಬಲವನ್ನು 212 ಯುದ್ಧ ನೌಕೆಗಳು ಮತ್ತು 458 ವಿಮಾನಗಳ ಪಡೆಯಾಗಿ ಬೆಳೆಸುವ ಉದ್ದೇಶ ಹೊಂದಿದೆ.
from India & World News in Kannada | VK Polls https://ift.tt/2Z7RVN7