ಪಟನಾ: ವಿಷಪೂರಿತ ಹಾವು, ಅದರಲ್ಲೂ ಕಚ್ಚಿದರೆ ತಕ್ಷಣಕ್ಕೆ ಚಿಕಿತ್ಸೆ ಸಿಗದಿದ್ದರೆ ಮನುಷ್ಯ ಬದುಕುಳಿಯಲಾರ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ನಾಗರಹಾವಿನಿಂದ ಕಚ್ಚಿಸಿಕೊಂಡವ ಸಾಯುವ ಬದಲು ಹಾವೇ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ. ಹೌದು, ಬಿಹಾರದ ಸುಖಾನಗರ ಎಂಬ ಗ್ರಾಮದಲ್ಲಿ ಸುಬೋಧ್ ಪ್ರಸಾದ್ ಸಿಂಗ್ (55) ತೋಟದಲ್ಲಿ ಹೂವನ್ನು ಕೀಳಲು ಹೋಗಿದ್ದ. ಆ ಸಂದರ್ಭದಲ್ಲಿ ವಿಷಪೂರಿತ ನಾಗರಹಾವೊಂದು ಅವರಿಗೆ ಕಚ್ಚಿದೆ. ಗಾಬರಿಗೊಳ್ಳದ ಸಿಂಗ್ ತಮ್ಮ ಜನಿವಾರ ತೆಗೆದು ಹಾವು ಕಚ್ಚಿದ ಜಾಗಕ್ಕಿಂತ ಸ್ವಲ್ಪ ಮೇಲೆ ಗಟ್ಟಿಯಾಗಿ ಕಟ್ಟಿದ. ಹೆಚ್ಚು ತಡ ಮಾಡದೆ ಅವರನ್ನು ಮನೆಯವರು ಆಸ್ಪತ್ರೆಗೆ ಸಾಗಿಸಿದರು. ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರಿಂದ ಸಿಂಗ್ ಪ್ರಾಣಾಪಾಯದಿಂದ ಪಾರಾದರು. ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆ ತಂದ ಕುಟುಂಬ ಸದಸ್ಯರು ಹಾವು ಅಲ್ಲೆ ಇದ್ದರೆ ಅಪಾಯ ಎಂದುಕೊಂಡು ಹುಡುಕಿಕೊಂಡು ತೋಟಕ್ಕೆ ಹೋಗಿ ನೋಡಿದರೆ ಹಾವಲ್ಲಿ ಸತ್ತು ಬಿದ್ದಿತ್ತು. ಹಾವೇಕೆ ಸತ್ತಿತು? ಪಶು ವೈದ್ಯಾಧಿಕಾರಿ ಪ್ರಸಾದ್ ಸಾಹು ಅವರು ಹೇಳುವ ಪ್ರಕಾರ ಪೊರೆ ಕಳಚಿಕೊಳ್ಳುವ ಸಂದರ್ಭದಲ್ಲಿ ಹಾವು ಬಹಳ ನೋವಿನಲ್ಲಿರುತ್ತದೆ. ಈ ಸಂದರ್ಭದಲ್ಲಿ ಅದು ಯಾರಿಗಾದರು ಕಚ್ಚಿದರೆ ಹೆಚ್ಚಿನ ವಿಷ ಅದರ ಬಾಯಲ್ಲಿಯೇ ಉಳಿದು ಬಿಡುತ್ತದೆ. ಹೀಗಾಗಿ ಅದು ಸಾವನ್ನಪ್ಪುತ್ತದೆ. ಈ ಹಾವು ಪೊರೆ ಕಳುಚುವ ಸ್ಥಿತಿಯಲ್ಲಿತ್ತು. ಹೀಗಾಗಿ ಕಚ್ಚಿದ ಕೂಡಲೇ ಸಾವನ್ನಪ್ಪಿದೆ ಎಂದು ಸಾಹು ಅಭಿಪ್ರಾಯ ಪಟ್ಟಿದ್ದಾರೆ.
from India & World News in Kannada | VK Polls https://ift.tt/2ZKOGKQ