ಬೆಂಗಳೂರು: ಕಕ್ಷೆಗಾಮಿಯಿಂದ ಪ್ರತ್ಯೇಕಗೊಂಡ ಬಳಿಕ ಮೊದಲ ಬಾರಿಗೆ ಅನ್ನು ಚಂದ್ರನ ಮೇಲೆ ಇಳಿಸಲು ಅನುಕೂಲವಾಗುವಂತೆ ಕೆಳಗಿನ ಕಕ್ಷೆಗೆ ತಳ್ಳುವ ಕಾರ್ಯವನ್ನು ಮಂಗಳವಾರ ಬೆಳಗ್ಗೆ 8:50ಕ್ಕೆ ಯಶಸ್ವಿಯಾಗಿ ನೆರವೇರಿಸಿದೆ. ಲ್ಯಾಂಡರ್ ವಿಕ್ರಮ್ ಅನ್ನು ಕಕ್ಷೆಗಾಮಿಯಿಂದ ನಿನ್ನೆ ಯಶಸ್ವಿಯಾಗಿ ಬೇರ್ಪಡಿಸಲಾಗಿತ್ತು, ಇಂದು ಲ್ಯಾಂಡರ್ನಲ್ಲಿ ಅಳವಡಿಸಿರುವ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಿಸಿ ಕೆಳಗಿನ ಕಕ್ಷೆಗೆ ತಳ್ಳುವ ಕಾರ್ಯ ಮಾಡಲಾಯಿತು. ಇಷ್ಟು ದಿನವೂ ಕಕ್ಷೆಗಾಮಿಗೇ ಕಮಾಂಡ್ಗಳನ್ನು ನೀಡುವ ಮೂಲಕ ವಿಕ್ರಮ್ ಮತ್ತು ಪ್ರಜ್ಞಾನ್ (ರೋವರ್)ಗಳನ್ನು ನಿಯಂತ್ರಿಸಲಾಗುತ್ತಿತ್ತು. ಇದೀಗ ನೇರವಾಗಿ ಲ್ಯಾಂಡರ್ ಮತ್ತು ರೋವರ್ಗಳಿಗೆ ಕಮಾಂಡ್ಗಳನ್ನು ರವಾನಿಸಲಾಗುತ್ತಿದೆ. 'ಇಂದಿನ ಕಕ್ಷೆ ಇಳಿಕೆ ಕಾರ್ಯಾಚರಣೆ 4 ಸೆಕೆಂಡ್ಗಳ ಅವಧಿಯದ್ದಾಗಿತ್ತು. ವಿಕ್ರಮ್ ಈಗ 104 ಕಿ.ಮೀ x 128 ಕಿ.ಮೀ ಕಕ್ಷೆಯಲ್ಲಿ ಸುತ್ತಿದ್ದರೆ, ಚಂದ್ರಯಾನ-2 ಮಾತೃನೌಕೆ ಮೊದಲಿನ ಕಕ್ಷೆಯಲ್ಲೇ ಸುತ್ತುತ್ತಿದೆ. ಆರ್ಬಿಟರ್ ಮತ್ತು ಲ್ಯಾಂಡರ್ ಎರಡೂ ಸುಸ್ಥಿತಿಯಲ್ಲಿವೆ' ಎಂದು ಇಸ್ರೋ ತಿಳಿಸಿದೆ. ಮುಂದಿನ ಹಂತದ ಕಕ್ಷಾವತರಣ ಸೆಪ್ಟೆಂಬರ್ 4ರ ಬೆಳಗಿನ ಜಾವ 3:30ರಿಂದ 4:30ರ ನಡುವೆ ನಡೆಯಲಿದೆ. ವಿಕ್ರಮ್ ಮತ್ತು ಪ್ರಜ್ಞಾನ್ ಒಳಗೊಂಡ ಕೋಶವನ್ನು ಸೋಮವಾರ ಬೆಳಗಿನ ಜಾವ 1:15ಕ್ಕೆ ಯಶಸ್ವಿಯಾಗಿ ಕಕ್ಷೆಗಾಮಿಯಿಂದ ಬೇರ್ಪಡಿಸಿ ಚಂದ್ರನೆಡೆಗೆ ತಳ್ಳಿ ಬಿಡಲಾಗಿತ್ತು. ಚಂದ್ರನ ನೆಲವನ್ನು ಸ್ಪರ್ಶಿಸುವ ಕೊನೆಯ ಹಂತದ 15 ನಿಮಿಷಗಳ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿರುತ್ತದೆ ಎಂದು ಇಸ್ರೋ ತಿಳಿಸಿದೆ. ಸೆಪ್ಟೆಂಬರ್ 7ರಂದು ಬೆಳಗಿನ ಜಾವ 1:30ರಿಂದ 2:30ರ ನಡುವೆ ವಿಕ್ರಮ್ ಮತ್ತು ಪ್ರಜ್ಞಾನ್ ಚಂದ್ರನ ನೆಲವನ್ನು ಸ್ಪರ್ಶಿಸಲಿವೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
from India & World News in Kannada | VK Polls https://ift.tt/2LjKH4i