ಕಲಬುರಗಿ: ಮುಂದಿನ ಎರಡು ವರ್ಷಗಳಲ್ಲಿ 16 ಸಾವಿರ ಪೊಲೀಸ್ ಪೇದೆ ಹಾಗೂ 650 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔರಾದ್ಕರ್ ವರದಿ ಅನುಷ್ಠಾನದ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ರಾಜ್ಯ ಹಣಕಾಸು ಆಯೋಗ ಮತ್ತು ಗೃಹ ಇಲಾಖೆ ನಡುವೆ ಕೆಲ ಅಂಕಿಅಂಶಗಳ ಕುರಿತು ಸ್ಪಷ್ಟತೆ ಇರಲಿಲ್ಲ. ವರದಿಯಲ್ಲಿ ಜೇಲರ್ಸ್ ಮತ್ತು ಫೈರ್ ಫೈಟರ್ಸ್ ಸೇರ್ಪಡೆ ಆಗಿರಲಿಲ್ಲ. ಉಭಯ ಇಲಾಖೆಗಳು ಎರಡು ಸುತ್ತಿನ ಚರ್ಚೆ ಬಳಿಕ ಅವರನ್ನು ಸಹ ವರದಿ ವ್ಯಾಪ್ತಿಗೆ ತರಲಾಗಿದೆ. ಹೀಗಾಗಿ ಎರಡು-ಮೂರು ದಿನಗಳಲ್ಲಿ ಅಧಿಸೂಚನೆ ಹೊರಬೀಳಲಿದೆ ಎಂದು ತಿಳಿಸಿದರು. ಇಂದು (ಸೋಮವಾರ) ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಇಲ್ಲಿ ಸಾಂವಿಧಾನಿಕ ಮತ್ತು ರಾಜಕೀಯ ಗೊಂದಲ ಇದೆ. ಈ ಗೊಂದಲ ನಿವಾರಣೆಯಾಗಿ ಎಲ್ಲರೂ ಹಾದಿ ನೋಡುತ್ತಿದ್ದೇವೆ. ಸ್ಪೀಕರ್ ತೀರ್ಪಿನ ಪ್ರಕಾರ, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ. ಅರ್ಜಿ ವಿಚಾರಣೆ ಮುನ್ನವೇ ಚುನಾವಣೆ ಘೋಷಣೆ ಆಗಿದೆ. ಕಾನೂನು ಪ್ರಕ್ರಿಯೆ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಹೇಳಿದರು. ಇನ್ನು ಅನರ್ಹ ಶಾಸಕರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರವಾಗತ್ತೆ. ಪಕ್ಷದ ಹೈಕಮಾಂಡ್ ಎಲ್ಲವನ್ನು ನೋಡಿಕೊಳ್ಳುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
from India & World News in Kannada | VK Polls https://ift.tt/30Jh6W6