ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಕಠಿಣ ಸಮಯದಲ್ಲಿ ನಾನಾ ಬಗೆಯ ಸಹಾಯ ಮಾಡುವ ಬಾಲಿವುಡ್ ನಟ ದೇಶಾದ್ಯಂತ ಬಹುದೊಡ್ಡ ಹೆಸರು ಮಾಡಿದ್ದಾರೆ. ಆದರೆ, ಪ್ರಸ್ತುತ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಹಣಾಹಣಿಯಲ್ಲಿಯೂ ಅಭಿಮಾನಿಯೊಬ್ಬ ಬಾಲಿವುಡ್ ನಟನ ಸಹಾಯ ಕೋರಿದ್ದರು. ಸೌಥ್ಹ್ಯಾಂಪ್ಟನ್ನ ರೋಸ್ ಬೌಲ್ ಅಂಗಳದಲ್ಲಿ ಐದನೇ ದಿನವಾದ ಮಂಗಳವಾರ ಪ್ರಥಮ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್ ತಂಡ 249 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಐದನೇ ದಿನದ ಬಹುತೇಕ ಸಮಯ ನ್ಯೂಜಿಲೆಂಡ್ ತಂಡದ ನಾಯಕ ಭಾರತೀಯ ಬೌಲರ್ಗಳಿಗೆ ಕಾಡಿದರು. ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅವರ ಮಾರಕ ಬೌಲಿಂಗ್ ದಾಳಿಗೆ ಒಂದು ತುದಿಯಲ್ಲಿ ಕಿವೀಸ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ಗೆ ಮರಳುತ್ತಿದ್ದರೆ, ನಾಯಕ ವಿಲಿಯಮ್ಸನ್ ಮಾತ್ರ ಒಂದು ತುದಿಯಲ್ಲಿ ಕಲ್ಲಿನಿಂದ ಗಟ್ಟಿಯಾಗಿ ನಿಂತು ಬಿಟ್ಟರು. ಒಂದು ಹಂತದಲ್ಲಿ ಶಮಿ, ಬುಮ್ರಾ ಹಾಗೂ ಇಶಾಂತ್ ಈ ಮೂವರು ಬೌಲರ್ಗಳ ಕೈಯಲ್ಲಿ ಕಿವೀಸ್ ನಾಯಕನನ್ನು ಔಟ್ ಮಾಡಲು ಸಾಧ್ಯವಾಗಲೇ ಇಲ್ಲ. ಸಾಕಷ್ಟು ನಿಧಾನಗತಿಯ ಬ್ಯಾಟಿಂಗ್ನಿಂದ ಬೌಲರ್ಗಳಿಗೆ ಮಾತ್ರವಲ್ಲದೇ ಪಂದ್ಯ ವೀಕ್ಷಿಸುತ್ತಿದ್ದ ಭಾರತೀಯ ಅಭಿಮಾನಿಗಳಿಗೂ ಕೂಡ ವಿಲಿಯಮ್ಸನ್ ತಲೆ ನೋವು ತರಿಸಿದರು. ಈ ವೇಳೆ ಅಭಿಮಾನಿಯೊಬ್ಬ ಬಾಲಿವುಡ್ ನಟ ಸೋನು ಸೂದ್ಗೆ ಟ್ವೀಟ್ ಮಾಡಿ, ವಿಲಿಯಮ್ಸನ್ ಅವರನ್ನು ಬೇಗ ಪೆವಿಲಿಯನ್ಗೆ ಮರಳುವಂತೆ ಮಾಡಿ ಎಂದು ಆಗ್ರಹಿಸಿದರು. "ಹಲೋ ಸೋನು ಸೂದ್, ದಯವಿಟ್ಟು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಪೆವಿಲಿಯನ್ಗೆ ಮರಳುವಂತೆ ಮಾಡಿ," ಎಂದು ಅಭಿಮಾನಿ ಟ್ವೀಟ್ ಮಾಡಿದರು. ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿದ ಸೋನು ಸೂದ್, "ನಮ್ಮ ತಂಡದಲ್ಲಿ ಅವರನ್ನು ಔಟ್ ಮಾಡಬಲ್ಲ ದಿಗ್ಗಜ ಬೌಲರ್ಗಳಿದ್ದಾರೆ. ಅದರಂತೆ ಅವರು ಪೆವಿಲಿಯನ್ಗೆ ತೆರಳಿದ್ದಾರೆ," ಎಂದು ಟ್ವೀಟ್ ಮಾಡಿದರು. ಐದನೇ ದಿನ ದೀರ್ಘ ಕಾಲ ಕ್ರೀಸ್ನಲ್ಲಿ ನಿಂತುಕೊಂಡ ಕೇನ್ ವಿಲಿಯಮ್ಸನ್ ಒಟ್ಟು 177 ಎಸೆತಗಳನ್ನು ಎದುರಿಸಿ, ಆರು ಬೌಂಡರಿಗಳೊಂದಿಗೆ 49 ರನ್ ಗಳಿಸಿದರು. ನಂತರ, ಇಶಾಂತ್ ಶರ್ಮಾ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ವಿಲಿಯಮ್ಸನ್ ಕ್ಯಾಚ್ ಕೊಟ್ಟು ಔಟ್ ಆದರು. ಕೇನ್ ಔಟ್ ಆದ ಬಳಿಕ ಟಿಮ್ ಸೌಥಿ ನಿರ್ಣಾಯಕ 30 ರನ್ ಗಳನ್ನು ತಂಡಕ್ಕೆ ಕೊಡುಗೆಯಾಗಿ ನೀಡಿದರು. ಅದರಂತೆ ಕಿವೀಸ್ಗೆ ಪ್ರಥಮ ಇನಿಂಗ್ಸ್ನಲ್ಲಿ 32 ರನ್ ಮುನ್ನಡೆ ಪಡೆಯಿತು. ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಭಾರತ ತಂಡ 5ನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 64 ರನ್ ಗಳಿಸಿದ್ದು, 32 ರನ್ ಮುನ್ನಡೆ ಪಡೆದಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(8*) ಹಾಗೂ ಚೇತೇಶ್ವರ್ ಪೂಜಾರ(12*)ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆದರೆ, ಆರಂಭಿಕ ರೋಹಿತ್ ಶರ್ಮಾ (30) ಮತ್ತೊಮ್ಮೆ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲರಾದರು. ಇನ್ನು ಶುಭಮನ್ ಗಿಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gV3rFG