ಉಪ ಚುನಾವಣೆಯಲ್ಲಿ ಆಯಾರಾಮ್‌ಗಳು ಗಯಾರಾಮ್‌ ಆಗೋದ್ರು!; ಪಕ್ಷಾಂತರಿಗಳಿಗೆ ತಕ್ಕ ಶಿಕ್ಷೆ

ಹೊಸದಿಲ್ಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆ ಜತೆಜತೆಗೆ ದೇಶದ 16 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 51 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿಯೂ ಬಿಜೆಪಿ ಮತ್ತದರ ಮಿತ್ರ ಪಕ್ಷಗಳಿಗೆ ಕೊಂಚ ಹಿನ್ನಡೆ ಅನುಭವಿಸಿವೆ. ಈ ಹಿಂದೆ ಇದ್ದ 30 ಸ್ಥಾನಗಳ ಪೈಕಿ ನಾಲ್ಕು ಕಳೆದುಕೊಂಡಿದ್ದರೆ, ಕಾಂಗ್ರೆಸ್‌ ನೇತೃತ್ವದ ಯುಪಿಎ 12 ಸ್ಥಾನಗಳನ್ನು ಉಳಿಸಿಕೊಂಡಿವೆ.ಉಳಿದ ಸ್ಥಾನಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿವೆ. ಆದರೆ ಪಕ್ಷಾಂತರಿಗಳಿಗೆ ಮತದಾರರು ಸೋಲುಣಿಸುವ ಮೂಲಕ ಪಾಠ ಕಲಿಸಿದ್ದಾರೆ. ಗುಜರಾತಿನಲ್ಲಿ ಒಬಿಸಿ ಕೋಟಾ ಆಂದೋಲನದ ಮೂಲಕ ಸಂಚಲನ ಮೂಡಿಸಿ ಕಾಂಗ್ರೆಸ್‌ ಸೇರಿದ್ದ ಮಾಜಿ ಶಾಸಕರಾದ ಅಲ್ಪೇಶ್‌ ಠಾಕೂರ್‌ ಹಾಗೂ ಅವರ ಸಹವರ್ತಿ ಕೊನೆ ಗಳಿಗೆಯಲ್ಲಿ ಬಿಜೆಪಿಗೆ ಜಿಗಿದು ರಾಧಾನ್‌ಪುರ ಹಾಗೂ ಬಯಾಡ್‌ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸೋತಿದ್ದಾರೆ. ಕಳೆದ ಸಲ ಕಾಂಗ್ರೆಸ್‌ಮೂಲಕ ಕ್ರಮವಾಗಿ ಗೆದ್ದಿದ್ದ ಠಾಕೂರ್‌ ಹಾಗೂ ಝಾಲಾ ಬಿಜೆಪಿಯ ಆಪರೇಷನ್‌ ಕಮಲಕ್ಕೆ ಬಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮರು ಆಯ್ಕೆ ಬಯಸಿದ್ದರು. ಅಲ್ಪೇಶ್‌ ಠಾಕೂರ್‌, ಕಾಂಗ್ರೆಸ್‌ ಪ್ರತಿಸ್ಪರ್ಧಿ ರಘುಬಾಯ್‌ ದೇಸಾಯಿ ಅವರಿಂದ 3807 ಹಾಗೂ ಝಾಲಾ ಅವರು ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಜಶುಭಾಯ್‌ ಪಟೇಲ್‌ರಿಂದ 743 ಮತಗಳ ಅಂತರದಲ್ಲಿ ಸೋತಿದ್ದಾರೆ. ಇತ್ತ ಮಹಾರಾಷ್ಟ್ರದ ಸತಾರ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಹೊರಬಿದ್ದಿದೆ. ಕಳೆದ ಬಾರಿ ಎನ್‌‌ಸಿಪಿಯಿಂದ ಸ್ಪರ್ಧಿಸಿ ಸಂಸದರಾಗಿದ್ದ ಉದಯನ್‌ರಾಜೆ ಪ್ರತಾಪ್‌ಸಿನ್ಹಾ ಮಹಾರಾಜ್‌ ಭೋಸ್ಲೆ ಅವರು ಸೆಪ್ಟೆಂಬರ್‌ನಲ್ಲಿ ಬಿಜೆಪಿಗೆ ಜಿಗಿದು ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಎನ್‌ಸಿಪಿಯ ಶ್ರೀನಿವಾಸ್‌ ದಾದಾಸಾಹೇಬ್‌ ಪಾಟೀಲ್‌ ಮುಂದೆ ಸೋಲು ಕಂಡಿದ್ದಾರೆ. ಚುನಾವಣಾ ರಾರ‍ಯಲಿ ವೇಳೆ ಸುರಿವ ಮಳೆಯಲ್ಲೇ ನಿಂತು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಭಾಷಣ ಮಾಡಿದ್ದು ಮತದಾರರ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಮುಂದುವರಿದ ಬಿಜೆಪಿ ಅಬ್ಬರ: ಉತ್ತರ ಪ್ರದೇಶದ 11 ಸೀಟುಗಳ ಪೈಕಿ 7ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಎಸ್ಪಿ ಸಂಸದ ಅಜಂ ಖಾನ್‌ ಪತ್ನಿ ತಜೀಮ್‌ ಫಾತೀಮಾ ಸ್ಪರ್ಧಿಸಿದ್ದ ಸ್ಪರ್ಧಿಸಿದ್ದ ರಾಂಪುರ ಸೇರಿ ಮೂರು ಕ್ಷೇತ್ರಗಳಲ್ಲಿ ಎಸ್ಪಿ ಗೆದ್ದಿದೆ. ಬಿಜೆಪಿ ಮಿತ್ರ ಪಕ್ಷ ಅಪ್ನಾದಳ (ಸೋನಿಲಾಲ್‌) ಪ್ರತಾಪ್‌ಗಢ ಸೀಟನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತ ಮಧ್ಯ ಪ್ರದೇಶದಲ್ಲಿ ಜುಬುವಾ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್‌ ಕಿತ್ತುಗೊಂಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಕಾಂತಿಲಾಲ್‌ ಬಹುರಿಯಾ 27,804 ಮತಗಳಿಂದ ಬಿಜೆಪಿಯ ಬಾನು ಬಹುರಿಯಾ ಅವರನ್ನು ಸೋಲಿಸಿದ್ದಾರೆ. 2 ಸೀಟೂ ಎಐಎಡಿಎಂಕೆ ಪಾಲು: ತಮಿಳುನಾಡಿನ ವಿಕಾರವಂಡಿ ಮತ್ತು ನನ್‌ಗುನೇರಿ ಕ್ಷೇತ್ರಗಳೂ ಆಡಳಿತಾರೂಢ ಎಐಎಡಿಎಂಕೆ ಪಾಲಾಗಿವೆ. ಇಲ್ಲಿ ಡಿಎಂಕೆ ಆರ್ಭಟ ನಡೆದಿಲ್ಲ. ಕಳೆದ ಏಪ್ರಿಲ್‌ ಹಾಗೂ ಮೇನಲ್ಲಿ ರಾಜ್ಯದ 22 ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ 9ರಲ್ಲಿ ಗೆದ್ದು ಸರಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆಗ ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ 13 ಸೀಟುಗಳನ್ನು ಗೆದ್ದು ಪ್ರಬಲ ಪೈಪೋಟಿ ನೀಡಿತ್ತು. ಇತ್ತ ತೆಲಂಗಾಣದಲ್ಲಿ ಟಿಆರ್‌ಎಸ್‌ ಕಾಂಗ್ರೆಸ್‌ ತೆಕ್ಕೆಯಿಂದ ಹೂಜುರ್‌ನಗರ ಕ್ಷೇತ್ರ ಗೆದ್ದುಕೊಂಡಿದ್ದು, ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಪ್ರಾಬಲ್ಯ ಮುಂದುವರಿದಿದೆ. ಟಿಆರ್‌ಎಸ್‌ನ ಶಾನಂಪುಡಿ ಸೈದಿ ರೆಡ್ಡಿ ಅವರ ಗೆಲುವಿನ ಮೇಲೆ ಚುನಾವಣೆ ಹೊತ್ತಲ್ಲಿ ಭುಗಿಲೆದ್ದಿದ್ದ ರಸ್ತೆ ಸಾರಿಗೆ ನೌಕರರ ಪ್ರತಿಭಟನೆ ಯಾವ ಪರಿಣಾಮವೂ ಬೀರಿಲ್ಲ. ■ ಬಿಹಾರದಲ್ಲಿ ಕೇವಲ ಒಂದರಲ್ಲಿ ಮಾತ್ರ ಎನ್‌ಡಿಎಗೆ ಗೆಲುವು, ಆರ್‌ಜೆಡಿಗೆ ಎರಡರಲ್ಲಿ ಜಯ ■ ಯುಪಿಯ 11 ಕ್ಷೇತ್ರಗಳ ಪೈಕಿ 7 ಬಿಜೆಪಿ ಪಾಲು, ಈಶಾನ್ಯ ಭಾರತದಲ್ಲಿ ಎನ್‌ಡಿಎ ಮೇಲುಗೈ ■ ಎನ್‌ಸಿಪಿಯಿಂದ ಬಿಜೆಪಿಗೆ ಜಿಗಿದಿದ್ದ ಉದಯನ್‌ರಾಜೆ ಭೋಸ್ಲೆಗೆ ಸತಾರ ಲೋಕಸಭೆ ಕ್ಷೇತ್ರದಲ್ಲಿ ಸೋಲು ■ ಬಿಹಾರದ ಸಮಷ್ಠಿಪುರ ಮೀಸಲು ಲೋಕಸಭೆ ಕ್ಷೇತ್ರದಿಂದ ಲೋಕ ಜನಶಕ್ತಿ ಪಾರ್ಟಿ ಪ್ರಿನ್ಸ್‌ರಾಜ್‌ ಗೆಲುವು ■ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಆರ್ಭಟ. 4ರ ಪೈಕಿ 3 ಕ್ಷೇತ್ರಗಳಲ್ಲಿ ಜಯ, ಶಿರೋಮಣಿ ಅಕಾಲಿದಳಕ್ಕೆ 1 ಸ್ಥಾನ


from India & World News in Kannada | VK Polls https://ift.tt/2WaITy6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...